ಶ್ರೀನಿವಾಸಪುರ: ಪಟ್ಟಣದ ಯುವಕನೊಬ್ಬ ಕೋತಿ ಹಾಗೂ ನಾಯಿಗಳಿಗೆ ನಿತ್ಯ ದಾಸೋಹ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ದುಡಿಮೆಯ ಒಂದು ಪಾಲನ್ನು ಈ ಪ್ರಾಣಿಗಳ ಆಹಾರಕ್ಕಾಗಿ ಮೀಸಲಿಟ್ಟಿದ್ದಾನೆ.
ಈ ಯುವಕನ ಹೆಸರು ಶ್ರೀನಿವಾಸ. ಗಾರೆ ಮೇಸ್ತ್ರಿ ಶ್ರೀನಿವಾಸ ಎಂದರೆ ಇಲ್ಲಿನ ಜನರಿಗೆ ಸುಲಭವಾಗಿ ತಿಳಿಯುತ್ತದೆ. ಅಷ್ಟಿಷ್ಟು ಹಣದ ವ್ಯವಹಾರವೂ ಇದೆ. ಕೋತಿಗಳಿಗೆ ಹಾಗೂ ಬೀದಿ ನಾಯಿಗಳಿಗೆ ಪ್ರತಿ ದಿನ ಸಂಜೆ ಆಹಾರ ನೀಡುವುದು ಈ ಯುವಕನ ಹವ್ಯಾಸ.
ಈತ ಈ ಕಾಯಕವನ್ನು ಒಂದು ದಶಕದಿಂದಲೂ ಮಾಡಿಕೊಂಡು ಬಂದಿದ್ದಾನೆ. ಸಂಜೆ 5 ರಿಂದ 6 ಗಂಟೆ ಒಳಗೆ ಬೈಕ್ ಮೇಲೆ ಬ್ರೆಡ್, ಬನ್, ಬಾಳೆಹಣ್ಣು ಇತ್ಯಾದಿ ತಿನಿಸುಗಳನ್ನು ಹೊತ್ತು ತರುತ್ತಾನೆ. ನಾಯಿ ಹಾಗೂ ಕೋತಿಗಳು ನಿಗದಿತ ಸ್ಥಳದಲ್ಲಿ ಶ್ರೀನಿವಾಸನಿಗಾಗಿ ಕಾದು ಕುಳಿತಿರುತ್ತವೆ. ಬೈಕ್ ಶಬ್ದ ಕೇಳಿಸಿದೊಡನೆ ಎದ್ದು ಹಿಂದೆ ಓಡಲು ಪ್ರಾರಂಭಿಸುತ್ತವೆ.
ಶ್ರೀನಿವಾಸ ಬೈಕ್ ನಿಲ್ಲಿಸುತ್ತಿದಂತೆ ಕೋತಿಗಳು ಸುತ್ತುವರಿದು ಕೈಚಾಚುತ್ತವೆ. ನಾಯಿಗಳು ಸುತ್ತಲೂ ನೆರೆದು ಬಾಲ ಅಲ್ಲಾಡಿಸಿಕೊಂಡು ನಿಲ್ಲುತ್ತವೆ. ಶ್ರೀನಿವಾಸನ ಸನ್ನಿಧಿಯಲ್ಲಿ ವೈರತ್ವಕ್ಕೆ ಎಡೆಯಿಲ್ಲ. ಕೋತಿ, ನಾಯಿಗಳು ಪರಸ್ಪರ ಜಗಳವಾಡದೆ ಹಾಕಿದ್ದನ್ನು ಸಾಮರಸ್ಯದಿಂದ ತಿಂದು ಹೋಗುತ್ತವೆ. ಕೆಲವು ಕೋತಿಗಳು ಶ್ರೀನಿವಾಸನ ಬೆನ್ನೇರಿ ಭುಜದ ಮೇಲೆ ಕುಳಿತು ತಿಂಡಿ ಕೇಳುವುದುಂಟು.
ಕಾಡುಗಳು ಕಣ್ಮರೆಯಾದ ಮೇಲೆ ಕೋತಿಗಳು ನೆಲೆ ಕಳೆದುಕೊಂಡವು. ಬೀದಿ ನಾಯಿಗಳು ಆಹಾರವಿಲ್ಲದೆ ಅಲೆಯುತ್ತಿರುತ್ತವೆ. ಮನುಷ್ಯ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೂಕ ಪ್ರಾಣಿಗಳು ಏನು ಮಾಡುತ್ತವೆ? ಆದ್ದರಿಂದಲೇ ನನ್ನ ದುಡಿಮೆಯ ಸ್ವಲ್ಪ ಭಾಗವನ್ನು ಅವುಗಳಿಗೆ ಮೀಸಲಿಟ್ಟಿದ್ದೇನೆ. ಅದರಿಂದ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದು ಶ್ರೀನಿವಾಸ ಹೇಳುತ್ತಾನೆ.
ಪ್ರಾಣಿ ದಯೆಗೆ ಈ ಯುವಕ ಪ್ರತಿ ನಿತ್ಯ ₨500 ರಿಂದ 600 ಖರ್ಚು ಮಾಡುತ್ತಾನೆ. ಆದರೂ ದೇವರು ಕೊಡುತ್ತಾನೆ ಎಂಬುದು ಆತನ ನಿರಾಳ ಮಾತು. ಶ್ರೀನಿವಾಸನ ಪ್ರಾಣಿ ಪ್ರೀತಿಗೆ ಸ್ಥಳೀಯರಿಂದ ವಿರೋಧ ಬಂದಿದ್ದೂ ಉಂಟು. ಕೋತಿಗಳಿಗೆ ಆಹಾರ ನೀಡುವುದರಿಂದ ಅವು ಜಾಗ ಬಿಟ್ಟು ಹೋಗುವುದಿಲ್ಲ. ನಾಯಿಗಳು ಜನರಿಗೆ ಉಪಟಳ ನೀಡುತ್ತವೆ ಎಂದು ಗುಲ್ಲು ಎಬ್ಬಿಸಿದರು. ಸೇವೆಗೆ ಅಡ್ಡಿಪಡಿಸಿದ ಜನರನ್ನು ಸಮಾಧಾನಪಡಿಸಿ, ಹಿಡಿದ ದಾರಿ ಬಿಡದೆ ನಡೆಯುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.