ಕೋಲಾರ: ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಬಸ್ ಚಾಲಕ ಹೃದಯಾಘಾತದ ನಡುವೆಯೂ 30 ಮಕ್ಕಳನ್ನು ಸುರಕ್ಷಿತವಾಗಿರಿಸಿ ತಾನು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಬಯ್ಯಪ್ಪನಹಳ್ಳಿ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಚೊಕ್ಕಹಳ್ಳಿ ಚಿನ್ಮಯ ಗ್ರಾಮೀಣ ವಿದ್ಯಾಲಯದ ಚಾಲಕ ಅಜೀಂಖಾನ್ (68) ಮೃತ ವ್ಯಕ್ತಿ. 33 ವರ್ಷಗಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇವೆಯಲ್ಲಿ ಒಂದೂ ಅಪಘಾತ ಮಾಡದೆ ಚಿನ್ನದ ಪದಕ ಪಡೆದಿದ್ದಾರೆ ಎನ್ನಲಾಗಿದೆ. 5 ವರ್ಷಗಳಿಂದ ವಿದ್ಯಾಲಯದ ಸೇವೆಯಲ್ಲಿದ್ದರು. ಬುಧವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿ ವಾಹನ ಚಾಲನೆ ಮಾಡುತ್ತಿದ್ದ ವೇಳೆ ಲಘು ಅಸ್ವಸ್ಥತೆಗೊಳಗಾದರು. ತಕ್ಷಣ ಬ್ರೇಕ್ ಹಾಕಿ, ಹಾರನ್ ಭಾರಿಸಿ ಸ್ಟೇರಿಂಗ್ ಮೇಲೆ ಕುಸಿದಿದ್ದಾರೆ. ಹೃದಯಾಘಾತದಿಂದ ಮರಣ ಸಂಭವಿಸಿದೆ ಎನ್ನಲಾಗಿದೆ.
ನಗರದ ವಾಸಿಯಾಗಿದ್ದ ಅವರಿಗೆ ಪತ್ನಿ, ಮೂವರು ಪುತ್ರಿಯರು, ಆರು ಪುತ್ರರು ಇದ್ದಾರೆ. ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.