ಕೋಲಾರ: ವಿವಿಧೆಡೆ ನಡೆದ ಹೆದ್ದಾರಿ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ರೂ. 1.50 ಲಕ್ಷ ಮೌಲ್ಯದ ಮಾಲು ಸಮೇತ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಂಗಳೂರು ಯಲಹಂಕ ಜಕ್ಕೂರು ಲೇಔಟ್ ನಿವಾಸಿ ಅಂಬರೀಶ್ (21) ಹಾಗೂ ಕೆಂಗೇರಿ ಬಳಿಯ ಭುವನೇಶ್ವರಿ ನಗರದ ಅಶೋಕ್ ಪಿಳ್ಳೆ ಬಂಧಿತರು. ಅವರಿಂದ ಎರಡು ದ್ವಿಚಕ್ರ ವಾಹನ, ಒಂದು ಚಿನ್ನದ ಉಂಗುರ, ಚಿನ್ನದ ಸರ ಹಾಗೂ 3 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆದ್ದಾರಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಹೊಸಕೋಟೆ ತಾಲ್ಲೂಕಿನ ಹಸಿಗಾಳ ಗ್ರಾಮದ ಲೋಕೇಶ್, ವಿಜಯಪುರದ ಸುಪ್ರಿತ್, ದೇವನಹಳ್ಳಿಯ ಪುಟ್ಟಪ್ಪನಗುಡಿ ಬೀದಿಯ ಶಶಿಕುಮಾರ್ ಅವರನ್ನು ಬಂಧಿಸಿ, ಮೂರು ಮೊಬೈಲ್ ಫೋನ್, 32 ಗ್ರಾಂ ತೂಕದ ಚಿನ್ನದ ಬಳೆ, ಕೈ ಗಡಿಯಾರ, ನಕಲಿ ಪಿಸ್ತೂಲ್, 1 ಲಕ್ಷ ಮೌಲ್ಯದ ಮಾರುತಿ ವ್ಯಾನ್ ಅನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.
ಈ ಗುಂಪು ಕೋಲಾರ ಗ್ರಾಮಾಂತರ , ರಾಷ್ಟ್ರೀಯ ಹೆದ್ದಾರಿ 4 , ಚಿಂತಾಮಣಿ ಗ್ರಾಮಾಂತರ, ಸಕಲೇಶಪುರ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸರಹದ್ದಿನಲ್ಲಿ ದರೋಡೆ ಮಾಡಿದ್ದರು.
ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಟಿ.ಆರ್. ಕುಮಾರಸ್ವಾಮಿ, ಪಿಎಸ್ಐಗಳಾದ ಕೆ.ಎಸ್. ದೇವೇಂದ್ರಪ್ಪ, ಜಗದೀಶ್, ಸಿಬ್ಬಂದಿ ಸೈಯದ್ ಖಾಸಿಂ, ಎಂ. ಆನಂದ್, ಹಮೀದ್ ಖಾನ್, ಮುನಿವೆಂಕಟಸ್ವಾಮಿ, ರಮೇಶ್ಬಾಬು, ರಾಮಚಂದ್ರ, ಎ.ರಮೇಶ್, ಮುರಳಿ, ಸಾದಿಕ್ ಪಾಷ, ಮಂಜುನಾಥ್, ಆರ್. ನಾರಾಯಣಸ್ವಾಮಿ, ಸುರೇಶ್, ಮಂಜುನಾಥ್, ಚಾಲಕ ಚಿಕ್ಕಆಂಜನಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.