ಮಾಲೂರು: ಬಯೋ ಹೆಸರಿನ ಕೀಟ ನಾಶಕ ಮಾರಾಟ ಮಾಡದೆ ಇರುವ ಬಗ್ಗೆ ಇಲಾಖೆ ಆದೇಶವಿದ್ದು, ಅದರಂತೆ ಮಾರಾಟಗಾರರು ಬಯೋ ಹೆಸರಿನ ಕೀಟ ನಾಶಕಗಳನ್ನು ಮಾರಾಟ ಮಾಡಬಾರದು ಎಂದು ಕೃಷಿ ಸಹಾಯಕ ನಿರ್ದೇಶಕಿ ಭವ್ಯರಾಣಿ ಹೇಳಿದರು.
ಪಟ್ಟಣದ ಕೃಷಿ ಸಮಾಜ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ರೈತರು ಖರೀದಿಸಿದ ರಸಗೊಬ್ಬರ ಕೀಟನಾಶಕಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ದಾಸ್ತಾನು ದರಪಟ್ಟಿ ಪ್ರಕಟಿಸಬೇಕು. ಇಲಾಖೆಗೆ ಪ್ರತಿ ತಿಂಗಳ 5ರೊಳಗೆ ದಾಸ್ತಾನು ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ರೈತರಿಗೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೀಡುತ್ತಿರುವ ಯೂರಿಯಾ ರಸಗೊಬ್ಬರವನ್ನು ಕೈಗಾರಿಕಾ ಪ್ರಾಂಗಣದಲ್ಲಿರುವ ಕೆಲವು ಕಾರ್ಖಾನೆಗಳಿಗೆ ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಪದಾಧಿಕಾರಿಗಳು ಮನವಿ ನೀಡಿದ್ದು, ಮಾರಾಟಗಾರರು ಕೃಷಿಗೆ ಬಳಸುವ ರಸಗೊಬ್ಬರಗಳನ್ನು ಕೈಗಾರಿಕೆಗಳಿಗೆ ಮಾರಬಾರದು ಎಂದರು.
ತಾಲ್ಲೂಕಿನ ಹೋಬಳಿವಾರು ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಟಾರ್ಪಾಲಿನ್ ದಾಸ್ತಾನು ಇದ್ದು, ಸಾಮಾನ್ಯ ರೈತರಿಗೆ ಶೇ 50ರ ರಿಯಾಯಿತಿ ದರದಲ್ಲಿ, ಪರಿಶಿಷ್ಟ ಜಾತಿ– ಪಂಗಡದ ರೈತರಿಗೆ ಶೇ 90ರ ರಿಯಾಯಿತಿ ದರದಲ್ಲಿ ಡಿ.16ರಿಂದ ವಿತರಿಸಲಾಗುವುದು. ಅಗತ್ಯ ದಾಖಲೆ ನೀಡುವ ಮೂಲಕ ಟಾರ್ಪಾಲಿನ್ ಪಡೆಯಬಹುದು ಎಂದು ತಿಳಿಸಿದರು.
ಕೃಷಿ ಮಾರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ವಿ.ವೇಮನ, ಅಧಿಕಾರಿಗಳಾದ ಮುನಿರಾಜು, ಪ್ರಕಾಶ್ ಬಾಬು, ಸವಿತಾ, ಸತೀಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.