ಕೋಲಾರ: ಬ್ಯಾಂಕ್ ನೌಕರನೆಂದು ಹೇಳಿಕೊಂಡು ಅಲ್ಪಸಂಖ್ಯಾತರಿಗೆ ಸಹಾಯಧನ ಹಾಗೂ ಸಾಲ ಕೊಡಿಸುವುದಾಗಿ 15ಕ್ಕೂ ಹೆಚ್ಚು ಗ್ರಾಹಕರಿಗೆ, ನಕಲಿ ಮಂಜೂರಾತಿ ಪತ್ರ ನೀಡಿ ಸುಮಾರು ₹ 20 ಲಕ್ಷ ವಂಚಿಸಿದ ಆರೋಪದ ಮೇಲೆ ಅಬ್ದುಲ್ ಶಹಬಾಷ್ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
₹ 82 ಸಾವಿರ ನಗದು, ವಿವಿಧ ಬ್ಯಾಂಕುಗಳ ರಬ್ಬರ್ ಸ್ಟಾಂಪ್, ಸೀಲ್, ಕಂಪ್ಯೂಟರ್, ಪ್ರಿಂಟರ್, ಹಾಗೂ ಕಾಗದವನ್ನು ಪತ್ರ ವಶಪಡಿಸಿಕೊಂಡಿದ್ದಾರೆ.
ಜ.20ರಂದು ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಆರೋಪಿ ರಹಮತ್ ನಗರದ ಅಬ್ದುಲ್ ಶಹಬಾಷ್, ಬ್ಯಾಂಕ್ ಗ್ರಾಹಕ ಜಬೀವುಲ್ಲಾ ಎಂಬುವರಿಗೆ ಬ್ಯಾಂಕ್ ನೌಕರನೆಂದು ನಂಬಿಸಿದ್ದಾನೆ. ₹ 19,15,000 ಸಾಲ ಮತ್ತು ಸಹಾಯಧನ ಕೊಡಿಸುವುದಾಗಿ ಹೇಳಿ ‘ಓನ್ ಕಾಂಟ್ರಿಬೂಷನ್’, ಆದಾಯ ತೆರಿಗೆ, ಪ್ರೊಸೆಸಿಂಗ್ ಶುಲ್ಕ ಇತ್ಯಾದಿಗಳ ನೆಪದಲ್ಲಿ ₹ 6,11,800 ಅನ್ನು ಹಲವಾರು ಬಾರಿ ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ. ಅವರು ದೂರಿನ ಮೇರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲವೇ ಗಂಟೆಗಳಲ್ಲಿ ಆರೋಪಿ ಶಹಬಾಷ್ನನ್ನು ಬಂಧಿಸಿ ಆತನ ‘ಎ.ಎನ್ ಸೈಬರ್ ಸೆಂಟರ್ ಮತ್ತು ಕಾಮನ್ ಸರ್ವಿಸ್ ಸೆಂಟರ್’ ಮೇಲೆ ದಾಳಿ ಮಾಡಿ ಹಣ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ವಿಭಾಗ ಡಿವೈಎಸ್ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ನಗರಠಾಣೆಯ ಪೊಲೀಸ್ ಇನ್ಸ್ಟೆಕ್ಟರ್ ಆರ್.ಹರೀಶ್, ಸಿಬ್ಬಂದಿ ಮೋಹನ್, ಆಂಜಿನಪ್ಪ, ಶ್ರೀನಾಥ್, ರವಿಕುಮಾರ್, ರವಿಚಂದ್ರ, ಚಾಲಕ ಮುರಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅಭಿನಂದಿಸಿದ್ದಾರೆ. ಆರೋಪಿಯಿಂದ ವಂಚನೆಗೊಳ ಗಾದವರು ಠಾಣೆಗೆ ದೂರು ನೀಡುವಂತೆ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.