ADVERTISEMENT

23 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 8:20 IST
Last Updated 11 ಅಕ್ಟೋಬರ್ 2012, 8:20 IST

ಕೋಲಾರ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 23 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ ರೂ 40 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಹೇಳಿದರು.

ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಬುಧವಾರ ಹೆಚ್ಚುವರಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯತಿಯಲ್ಲೂ ಪೈಪ್‌ಲೈನ್, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮತ್ತು ರೂ 13 ಲಕ್ಷ ವೆಚ್ಚದಲ್ಲಿ ತಲಾ ಎರಡು ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುವುದು.
 
ರೂ 7.5 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣ, ಪ್ರತಿ ವಿಧಾನಸಭಾ ಕ್ಷೇತ್ರದ ದಲಿತ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗಳನ್ನು ನಡೆಸಲು ರೂ 1.5 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು ಜಿಲ್ಲಾ ಪಂಚಾಯತ್‌ನಿಂದ ಬಿಡುಗಡೆ ಮಾಡಲು ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಆದೇಶ ನೀಡಲಾಗಿದೆ.

ಸಂಬಂಧಪಟ್ಟ ಸಮರ್ಪಕವಾದ ಅಂಕಿ ಅಂಶಗಳನ್ನು ಜಿಪಂಗೆ ಕಳುಹಿಸಿದ ಕೂಡಲೇ ಹಣ ಬಿಡುಗಡೆಯಾಗುತ್ತದೆ. ತಾಲ್ಲೂಕಿಗೆ ಎರಡು ಹಂತದಲ್ಲಿ 12.500 ಸಾವಿರ ಆಶ್ರಯಮನೆಗಳು ಮಂಜೂರಾಗಿವೆ. ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪಿಡಿಓ ಮತ್ತು ನೋಡಲ್ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು. ಕರೆುತ್ತರು.

ತಾಲ್ಲೂಕು ಪಂಚಾಯತ್‌ನ ಹೆಚ್ಚುವರಿ ಕಟ್ಟಡದಲ್ಲಿ ಬಸವ ವಸತಿ ಯೋಜನೆಯ ಅಧಿಕಾರಿಗಳು ಕಾರ್ಯನಿರ್ವಹಿಸಲು ಒಂದು ಕೊಠಡಿ ಮೀಸಲಿಡಬೇಕು. ಸಂಪೂರ್ಣ ಕಂಪ್ಯೂಟರಿಕರಣಗೊಂಡಿರವ ಕೊಠಡಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಅಧ್ಯಕ್ಷೆ ಚೌಡೇಶ್ವರಿ, ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ತಾಪಂ ಅಧ್ಯಕ್ಷೆ ರಮಾದೇವಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷೆ ರತ್ನಮ್ಮ, ಭೂ ಸಕ್ರಮಾತಿ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ತಾಪಂ ಉಪಾಧ್ಯಕ್ಷ ಮಂಜುನಾಥ್‌ಗೌಡ, ಸದಸ್ಯರಾದ ಸುವರ್ಣಮ್ಮ, ನಂದಿನಿ, ಕೋಮಲ, ಮುನಿಬೈರಪ್ಪ, ಕೃಷ್ಣಮೂರ್ತಿ, ಭಾಗ್ಯಲಕ್ಷ್ಮೀ, ನಾಗರಾಜ್, ನಾಗಮ್ಮ ಉಪಸ್ಥಿತರಿದ್ದರು.

ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಭಟ್ ಸ್ವಾಗತಿಸಿ, ಎಂಜಿನಿಯರ್ ಮಂಜುನಾಥ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.