ADVERTISEMENT

3513 ಮಂದಿಗೆ ಉದ್ಯೋಗಾವಕಾಶ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 7:10 IST
Last Updated 14 ಜನವರಿ 2011, 7:10 IST

ಕೋಲಾರ: ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೋಲಾರ ಜಿಲ್ಲಾಡಳಿತ ಸಹಯೋಗದಲ್ಲಿ ನಗರದ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ಗುರುವಾರ ಮುಕ್ತಾಯವಾದ ಬೃಹತ್ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಒಟ್ಟು 9374 ಆಕಾಂಕ್ಷಿಗಳ ಪೈಕಿ 3513 ಮಂದಿಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದೆ. ಅವರೆಲ್ಲರೂ ತರಬೇತಿಗೆ ಆಯ್ಕೆಯಾಗಿದ್ದಾರೆ. ಅವರಲ್ಲದೆ, ಉದ್ಯೋಗಕ್ಕೆ ಆಯ್ಕೆಯಾದ 1960 ಮಂದಿ ಪೈಕಿ  1046 ಮಂದಿಗೆ ಸ್ಥಳದಲ್ಲೆ ನೇಮಕ ಪತ್ರ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿಗಿಂತ ಕಡಿಮೆ ವಿದ್ಯಾರ್ಹತೆಯುಳ್ಳವರು 279, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು  3069, ಪಿಯುಸಿ ವಿದ್ಯಾರ್ಹತೆಯುಳ್ಳವರು 2452, ಐಟಿಐ, ಜೆಓಸಿ ಅರ್ಹತೆಯುಳ್ಳವರು 1459, ಡಿಪ್ಲೊಮಾ ವಿದ್ಯಾರ್ಹತೆಯುಳ್ಳವರು 470, ಪದವೀಧರರು 890, ಬಿಇ ಪದವೀಧರರು 368, ಸ್ನಾತಕೋತ್ತರ ಪದವೀಧರರು 314 ಮತ್ತು 73 ಅಂಗವಿಕಲರು ಮೇಳದಲ್ಲಿ ಪಾಲ್ಗೊಂಡಿದ್ದರು. 84 ಉದ್ಯೋಗದಾತ ಸಂಸ್ಥೆಗಳ ಪ್ರಮುಖ ಸಿಬ್ಬಂದಿ ಹಾಜರಿದ್ದು ತಮಗೆ ಅಗತ್ಯವಿರುವ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ, ತರಬೇತಿಗೆ ಆಯ್ಕೆ ಮಾಡಿಕೊಂಡರು.

ಸಮಾರೋಪ: ಗುರುವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಉದ್ಯೋಗಪತ್ರಗಳನ್ನು ವಿತರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ,  ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅದು ಸಾಧಕನ ಸ್ವತ್ತು. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಮಾತ್ರ ಬರ. ಬುದ್ಧಿಶಕ್ತಿಗಲ್ಲ ಎಂದು ಪ್ರತಿಪಾದಿಸಿದರು.ಮೇಳದ ಉದ್ಯೋಗಕ್ಕೆ ನೇಮಕಾತಿ ಹಾಗೂ ತರಬೇತಿಗೆ ನೇಮಕ ಆಗಿರುವ ಪ್ರಕ್ರಿಯೆ ಅತ್ಯಂತ ಆಶಾದಾಯಕವಾಗಿದೆ.  ಶೇ.65ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಎಸ್.ಆರ್.ಉಮಾಶಂಕರ್, ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ತ್ಯಾಗರಾಜನ್, ನಗರಸಭೆ ಅಧ್ಯಕ್ಷೆ ನಾಜಿಯಾ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯುತದ ಕಾರ್ಯನಿರ್ವಾಹಕ ನಿರ್ದೇಶಕ ಡಾ: ವಿಷ್ಣುಕಾಂತ ಎಸ್.ಚಟಪಲ್ಲಿ,  ನಿಗಮದ ರಾಜ್ಯ ದಕ್ಷಿಣ ವಲಯದ ವಿಶೇಷಾಧಿಕಾರಿ ಎಸ್.ಜೆ.ಹೇಮಚಂದ್ರ, ಜಿ.ಎನ್.ಶಿವಮೂರ್ತಿ, ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.