ಕೋಲಾರ: ತಾಲ್ಲೂಕಿನ ವಡಗೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ಬೆಳಿಗ್ಗೆ ರಸ್ತೆ ದಾಟುತ್ತಿದ್ದ ಕುರಿಗಳಿಗೆ ಕಾಡು ಡಿಕ್ಕಿ ಹೊಡೆದು 7 ಕುರಿಗಳು ಮೃತಪಟ್ಟಿವೆ.
ವಡಗೂರಿನ ಮುನಿವೆಂಕಟಪ್ಪ ಎಂಬುವರಿಗೆ ಸೇರಿದ ಕುರಿಗಳು ಕಾರು ಡಿಕ್ಕಿಯಿಂದಾಗಿ ಮೃತಪಟ್ಟಿದ್ದು, ಬೆಂಗಳೂರಿನ ಕತ್ರಿಗುಪ್ಪೆ ಮೂಲದವರ ಕಾರು ಎಂದು ತಿಳಿದುಬಂದಿದೆ. ಬೆಳಿಗ್ಗೆ 9.30ರಲ್ಲಿ ಕುರಿಗಳನ್ನು ಮೇಯಿಸಲು ಮುನಿವೆಂಕಟಪ್ಪ ಆಗಮಿಸಿದ್ದು, ರಸ್ತೆ ದಾಟುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ 7 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವು ದಿಕ್ಕಾಪಾಲಾಗಿ ಓಡಿವೆ. ಅಲ್ಲದೆ ಕಾರಿನ ಮುಂಭಾಗವೂ ಜಖಂಗೊಂಡಿದೆ. ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸಿದ್ದಾರೆ.
ಕುರಿಗಳು ಮೃತಪಟ್ಟಿರುವುದರಿಂದ ಸುಮಾರು ₨ 50-60 ಸಾವಿರ ನಷ್ಟವಾಗಿದ್ದು, ಶೀಘ್ರದಲ್ಲೇ ಪರಿಹಾರ ನೀಡುವುದಾಗಿ ಕಾರಿನ ಮಾಲೀಕರ ಹೇಳಿದ ಬಳಿಕ ಪ್ರಕರಣ ದಾಖಲಿಸದೆ ಇತ್ಯರ್ಥಪಡಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.