ಬಂಗಾರಪೇಟೆ: ಎರಡು ಕಡೆ ಬಿಎಂಸಿ ಸ್ಥಾಪಿಸಿದರೆ ತಾಲ್ಲೂಕಿನಲ್ಲಿ ಕ್ಯಾನ್ ರಹಿತವಾಗಿ ಹಾಲು ಸಾಗಾಣಿಕೆ ವ್ಯವಸ್ಥೆ ಜಾರಿಯಾಗಲಿದೆ ಎಂದು ಹಾಲು ಒಕ್ಕೂಟದ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ಹುನ್ಕುಂದ ಗ್ರಾಮದ ಹಾಲು ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಬಿಎಂಸಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬಿಎಂಸಿಯಲ್ಲಿ ಹಾಲನ್ನು ಶೇಖರಿಸುವ ಮೂಲಕ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ ಎಂದರು.
ಇಲ್ಲಿನ ಹಾಲನ್ನು ತಿರುಪತಿ ವೆಂಕಟರಮಣಸ್ವಾಮಿಗೆ ನೈವೇದ್ಯ, ಅಭಿಷೇಕ ಹಾಗೂ ಲಾಡು ತಯಾರಿಸಲು ಕಳುಹಿಸಲಾಗುತ್ತಿದೆ. ಹಾಗಾಗಿ ಕಲಬೆರಕೆ ಹಾಲನ್ನು ಪೂರೈಕೆ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಬಿಎಂಸಿಯಲ್ಲಿ ಹಾಲಿನ ಉಷ್ಣಾಂಶವನ್ನು ನಾಲ್ಕು ಡಿಗ್ರಿಗೆ ಇಳಿಸಿ, ಶೇಖರಿಸುವ ವ್ಯವಸ್ಥೆಯಿದೆ. ಬಳಿಕ ಹಾಲಿನ ಲಾರಿಗಳ ಮೂಲಕ ಮುಖ್ಯ ಕೇಂದ್ರಕ್ಕೆ ಸಾಗಿಸಿ, ವಿಲೇವಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕ್ಯಾನ್ಗಳಲ್ಲಿ ಹಾಲು ಸಾಗಿಸುವ ಸಂದರ್ಭ ಹಾಲು ಬದಲಿಸುವ, ಕಳವುಮಾಡುವ, ತಡವಾದರೆ ಕೆಟ್ಟುಹೋಗುವ ಸಾಧ್ಯತೆಯಿತ್ತು. ಈಗ ಆ ರೀತಿ ಆಗುವುದಿಲ್ಲ ಎಂದರು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ.ತಿಪ್ಪಾರೆಡ್ಡಿ ಮಾತನಾಡಿ, 'ಒಕ್ಕೂಟಕ್ಕೆ ನಿತ್ಯ ಸರಾಸರಿ 17 ಲಕ್ಷ ಹಾಲು ಪೂರೈಕೆಯಾಗುತ್ತಿದ್ದು, ಕೂಡಲೆ ವಿಲೇವಾರಿ ಮಾಡಬೇಕಾಗುತ್ತಿದೆ’ ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಿ.ಎಂ.ವೆಂಕಟೇಶ್, ಶಿಬಿರ ವ್ಯವಸ್ಥಾಪಕ ವೆಂಕಟರಮಣ,ಸಹಾಯಕ ವ್ಯವಸ್ಥಾಪಕ ಬಿ.ಮೋಹನ್ ಬಾಬು, ಹಿರಿಯ ತಾಂತ್ರಿಕರಾದ ತಿಪ್ಪಾರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರಪ್ಪ, ನಂಜಪ್ಪ, ವೆಂಕಟರಮಣಪ್ಪ, ಶ್ರೀನಿವಾಸಗೌಡ, ಕಟಮುನಿ, ಎಂ.ಚಲಪತಿ, ಅಲುವೇಲಪ್ಪ, ಗುಡಿವಲ ವರಮ್ಮ,ಸಾವಿತ್ರಮ್ಮ, ಹುನ್ಕುಂದ ಎಂ.ನಾಗರಾಜ್, ನಾರಾಯಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.