ADVERTISEMENT

ಕೃಷಿ ಹೊಂಡ: ಮೂರ್ತಿ ವಿಸರ್ಜನೆ ನಿಷೇಧ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 14:34 IST
Last Updated 21 ಆಗಸ್ಟ್ 2020, 14:34 IST

ಕೋಲಾರ: ಜಿಲ್ಲೆಯ ಕೃಷಿ ಹೊಂಡಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಿರ್ಬಂಧಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ರೈತರು ಕೃಷಿ ಭಾಗ್ಯ ಮತ್ತು ಇತರೆ ಯೋಜನೆಗಳಡಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿರುವುದರಿಂದ ಬಹುತೇಕ ಕೃಷಿ ಹೊಂಡಗಳು ತುಂಬಿವೆ. ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ಅಥವಾ ಮಕ್ಕಳು ಕೃಷಿ ಹೊಂಡಗಳಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ಹೋದಾಗ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ಆತಂಕ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಬೆಂಗಳೂರು ಸೇರಿದಂತೆ ನಗರ ಪ್ರದೇಶದಿಂದ ಹೆಚ್ಚಿನ ಮಂದಿ ಸ್ವಗ್ರಾಮಗಳಿಗೆ ಹಿಂದಿರುಗಿದ್ದು, ಎಲ್ಲೆಡೆ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೃಷಿ ಹೊಂಡದ ಮಾಲೀಕರು ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಕೃಷಿ ಹೊಂಡಗಳಿಗೆ ಪಾಲಿಥಿನ್‌ ಪ್ಲಾಸ್ಟಿಕ್ ಅಳವಡಿಸಲಾಗಿದ್ದು, ನೀರಿನಲ್ಲಿ ಬಿದ್ದರೆ ಹೊರ ಬರುವುದು ತುಂಬಾ ಕಷ್ಟ. ಹೀಗಾಗಿ ರೈತರು ಸುರಕ್ಷತೆ ದೃಷ್ಟಿಯಿಂದ ಕೃಷಿ ಹೊಂಡಗಳ ಸುತ್ತ ತಂತಿ ಬೇಲಿ ಅಥವಾ ಜೈವಿಕ ಬೇಲಿ ಅಳವಡಿಸಬೇಕು. ನೀರಿನಲ್ಲಿ ಪ್ಲಾಸ್ಟಿಕ್ ಹಗ್ಗ ಅಥವಾ ಟಯರ್‌ ಟ್ಯೂಬ್‌ ತೇಲಿ ಬಿಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕೃಷಿ ಹೊಂಡಗಳಲ್ಲಿ ಜನ ಅಥವಾ ಜಾನುವಾರುಗಳ ಪ್ರಾಣ ಹಾನಿ ಸಂಭವಿಸಿದರೆ ಮಾಲಿಕರನ್ನೇ ಹೊಣೆಗಾರರಾಗಿ ಪರಿಗಣಿಸಿ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.