ADVERTISEMENT

ಬಂಗಾರಪೇಟೆ: ಆರೈಕೆ ಜತೆ ನಿರಾಶ್ರಿತರಿಗೆ ಕೌಶಲ್ಯ ತರಬೇತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 8:10 IST
Last Updated 7 ಆಗಸ್ಟ್ 2025, 8:10 IST
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ತೆಂಗಿನ ನಾರಿನಿಂದ ಮ್ಯಾಟ್ ತಯಾರಿಸುತ್ತಿರುವುದು
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ತೆಂಗಿನ ನಾರಿನಿಂದ ಮ್ಯಾಟ್ ತಯಾರಿಸುತ್ತಿರುವುದು   

ಬಂಗಾರಪೇಟೆ: ತಾಲ್ಲೂಕಿನ ಬೀರಂಡಹಳ್ಳಿ ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರು ತಮ್ಮ ಜೀವನವನ್ನು ಸ್ವಾವಲಂಬಿಯಾಗಿ ರೂಪಿಸಿಕೊಳ್ಳಲು ಅಗತ್ಯವಿರುವ ಹೊಲಿಗೆ ತರಬೇತಿ, ಕೃಷಿಸ ಪಶುಸಂಗೋಪನೆ, ನೇಯ್ಗೆ ಸೇರಿದಂತೆ ಇನ್ನಿತರ ತರಬೇತಿಗಳನ್ನು ನೀಡಲಾಗುತ್ತಿದೆ. 

ಇದರಿಂದಾಗಿ ಈ ಕೇಂದ್ರಕ್ಕೆ ದಾಖಲಾಗುವ ನಿರಾಶ್ರಿತರು ಹೊರಬಂದ ಬಳಿಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇದರೊಂದಿಗೆ ನಿರಾಶ್ರಿತರು ಮತ್ತೆ ಭಿಕ್ಷಾಟನೆಯಲ್ಲಿ ತೊಡಗುವುದನ್ನು ನಿಯಂತ್ರಿಸಬಹುದಾಗಿದೆ. 

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವ ಭಿಕ್ಷುಕರು ಮತ್ತು ನಿರಾಶ್ರಿತರಿಗೆ ಆಶ್ರಯ ಮತ್ತು ಆರೈಕೆ ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ ಬೀರಂಡಹಳ್ಳಿ ಗ್ರಾಮದ ಬಳಿ 2002ರಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳು ನಾಗರಿಕರಿಂದ ವಸೂಲಿ ಮಾಡುವ ತೆರಿಗೆ ಹಣದಿಂದಲೇ ಈ ಕೇಂದ್ರ ನಿರ್ವಹಿಸಲ್ಪಡುತ್ತಿದೆ.

ADVERTISEMENT

ಈ ಕೇಂದ್ರದಲ್ಲಿ ಬಿಹಾರ, ಗುಜರಾತ್, ಉತ್ತರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದ ಮಾನಸಿಕ ಅಸ್ವಸ್ಥರು ಹಾಗೂ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಕೇಂದ್ರದಲ್ಲಿ 131 ಪುರುಷರು, 27 ಮಹಿಳೆಯರು ಸೇರಿ ಒಟ್ಟು 158 ಮಂದಿ ಆಶ್ರಯ ಪಡೆಯುತ್ತಿದ್ದು, 110 ಮಂದಿ ಮಾನಸಿಕ ಅಸ್ವಸ್ಥರಿದ್ದಾರೆ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ. 

ಸರ್ಕಾರದ ಅಂಗ ಸಂಸ್ಥೆ ಮೂಲಕ 10 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿ ಪುರುಷರಿಗೆ ಎರಡು ಡಾರ್ಮೆಂಟರಿ ಮತ್ತು ಮಹಿಳೆಯರಿಗೆ ಪ್ರತ್ಯೇಕ ಒಂದು ಡಾರ್ಮೆಂಟರಿ ಇದೆ. ನಿರಾಶ್ರಿತರಿಗೆ ವಾರಕ್ಕೊಮ್ಮೆ ಮಾಂಸದ ಊಟ, ವಾರಕ್ಕೆ ಮೂರು ದಿನ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ನಿತ್ಯ ವಿವಿಧ ಬಗೆಯ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ನಿರಾಶ್ರಿತರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮೂವರು ನರ್ಸ್‌ಗಳನ್ನು ನಿಯೋಜಿಸಲಾಗಿದೆ. ತಿಂಗಳಿಗೊಮ್ಮೆ ಮಾನಸಿಕ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮಾನಸಿಕ ಅಸ್ವಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಯತ್ನ ಮಾಡಲಾಗುತ್ತಿದೆ.

ನಿರಾಶ್ರಿತರ ಆಸಕ್ತಿಗೆ ಅನುಗುಣವಾಗಿ ಕೆಲಸಗಳನ್ನು ನಿಗದಿಪಡಿಸಲಾಗುತ್ತದೆ. ಅಲ್ಲದೆ, ಈ ರೀತಿ ಕೆಲಸದಲ್ಲಿ ತೊಡಗಿಕೊಳ್ಳುವವರಿಗೆ ಗಂಟೆಗೆ ₹38 ನಿಗದಿಪಡಿಸಲಾಗಿದ್ದು, ಕೆಲಸ ಮಾಡುವ ನಿರಾಶ್ರಿತರಿಗೆ ನೇರ ಸಂದಾಯ ಮಾಡಲು ಅವರಿಗೆ ಬ್ಯಾಂಕ್ ಖಾತೆ ಮಾಡಿಸಲಾಗಿದೆ. ನಿರಾಶ್ರಿತರು ಗುಣಮುಖರಾದ ಬಳಿಕ ಮನೆಗೆ ಮರಳಿದಾಗ ಅವರು ಮತ್ತೊಬ್ಬರ ಮೇಲೆ ಅವಲಂಬನೆಯಾಗದೆ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. 

ಹೊಲಿಗೆ ಯಂತ್ರ, ಬಟ್ಟೆ ಹೊಲಿಯುವ ತರಬೇತಿ, ಬೆಳೆ ಬೆಳೆಯುವುದು, ಸಾವಯವ ಕೃಷಿ ತರಬೇತಿ, ಹಸು, ಕುರಿ, ಕೋಳಿ ಸಾಕಾಣಿಕೆ ಮತ್ತು ನಿರ್ವಹಣೆ ತರಬೇತಿ, ಕೈಮಗ್ಗ ಮತ್ತು ಪವರ್ ಲೂಮ್ ನೇಯ್ಗೆ ,ತೆಂಗಿನ ನಾರಿನ ಮ್ಯಾಟ್ ತಯಾರಿಕೆ, ಫೆನಾಯಿಲ್, ಸೋಪ್ ತಯಾರಿಕೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ ತರಬೇತಿಯು ಸ್ವಾವಲಂಬನೆ ಜೀವನಕ್ಕೆ ನೆರವಾಗುತ್ತದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್. ರವಿಕುಮಾರ್ ಹೇಳಿದರು. 

ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ತೆಂಗಿನ ನಾರಿನಿಂದ ತಯಾರಿಸಿರುವ ಮ್ಯಾಟ್
ನಿರಾಶ್ರಿತರ ಕೇಂದ್ರದಲ್ಲಿ ಕೌಶಲ್ಯ ತರಬೇತಿಯಿಂದ ನಿರಾಶ್ರಿತರ ಸ್ವಯಂ ಉದ್ಯೋಗಕ್ಕೆ ದಾರಿಯಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ
ಎನ್. ವೆಂಕಟೇಶಪ್ಪ ತಹಶೀಲ್ದಾರ್ ಬಂಗಾರಪೇಟೆ

ಮ್ಯಾಟ್ ಸಿದ್ಧಪಡಿಸುವ ತರಬೇತಿ

ಪರಿಹಾರ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದ ತೆಂಗಿನ ನಾರು ಉತ್ಪನ್ನಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದೆ. ತೆಂಗಿನ ನಾರಿನಿಂದ ಮ್ಯಾಟ್ ತಯಾರಿಸುವ ತರಬೇತಿ ನೀಡಿ ನಿರಾಶ್ರಿತರಿಂದಲೇ ಮ್ಯಾಟ್ ತಯಾರಿಸಲಾಗುತ್ತಿದೆ. 12 ಮಂದಿ ಈಗಾಗಲೇ ಮ್ಯಾಟ್ ತರಬೇತಿಯನ್ನು ಪಡೆದಿದ್ದು ಇತರ ಆಸಕ್ತರಿಗೂ ಮ್ಯಾಟ್ ತರಬೇತಿ ನೀಡಲು ನಿರ್ಧರಿಸಲಾಗಿದೆ. ಮ್ಯಾಟ್‌ಗೆ ಅಗತ್ಯವಿರುವ ಕಚ್ಚಾವಸ್ತುಗಳನ್ನು ನಿಗಮವೇ ನೀಡಲಿದೆ. ಆ ಬಳಿಕ ನಿರಾಶ್ರಿತರು ಸಿದ್ಧಪಡಿಸಿದ ಮ್ಯಾಟ್‌ಗಳನ್ನು ಸಹ ನಿಗಮವೇ ಖರೀದಿಸಲಿದೆ.  

ನಿರಾಶ್ರಿತ ಕೇಂದ್ರದ ಕಾರ್ಯಕ್ಕೆ ಮೆಚ್ಚುಗೆ

ನಿರಾಶ್ರಿತರ ಕೇಂದ್ರದಲ್ಲಿ ಆರೈಕೆ ಜೊತೆಗೆ ವಿವಿಧ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ. 12 ಜನರು ಈಗಾಗಲೇ ತರಬೇತಿ ಪಡೆದು ಹುರಿ ಹಗ್ಗ ಮತ್ತು ಮ್ಯಾಟ್ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇದೊಂದು ಆದಾಯ ಉತ್ಪನ್ನ ಚಟುವಟಿಕೆಯಾಗಿದೆ.  ಡಾ.ಎಂ.ಆರ್ ರವಿ ಜಿಲ್ಲಾಧಿಕಾರಿ ಕೋಲಾರ ಜಿಲ್ಲೆ ಸರ್ಕಾರವೇ ಖರೀದಿಸಲಿ ನಿರಾಶ್ರಿತರ ಕೇಂದ್ರದಲ್ಲಿ ಸಿದ್ಧವಾಗುವ ಮ್ಯಾಟ್‌ಗಳನ್ನು ಸರ್ಕಾರವೇ ಖರೀದಿಸಬೇಕು. ಅವುಗಳನ್ನು ಎಲ್ಲ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಇದರಿಂದ ನಿರಾಶ್ರಿತರ ಪರಿಹಾರ ಕೇಂದ್ರ ಆದಾಯಕ್ಕೆ ದಾರಿಯಾಗಲಿದೆ.  ಎಂ.ಮಲ್ಲೇಶ್ ಬಾಬು ಸಂಸದರು ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.