ಬಂಗಾರಪೇಟೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಾಲ್ಲೂಕಿನಲ್ಲಿ ಅನುಷ್ಠಾನ ಗೊಳಸಬೇಕು. ಅರ್ಹ ಫಲಾನುಭವಿಗಳು ಯಾರು ಕೂಡ ಯೋಜನೆಯಿಂದ ವಂಚಿತರಾಗಬಾರದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಸಭಾಂಗಣದಲ್ಲಿ ಮಂಗಳವಾರ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಅರ್ಹರಿಗೂ ಯೋಜನೆಗಳು ಲಭಿಸುತ್ತಿದೆಯೇ ಎಂಬುದನ್ನು ಪ್ರಗತಿ ಪರಿಶೀಲನೆ ನಡೆಸಲಾಯಿತು ಎಂದರು.
ಯುವನಿಧಿ ಯೋಜನೆ ಕುರಿತು ತಾಲ್ಲೂಕಿನ ಎಲ್ಲ ಕಾಲೇಜುಗಳಲ್ಲಿ ಪ್ರಚಾರ ಮಾಡಿ ಯುವಕರಿಗೆ ಅರಿವು ಮೂಡಿಸಬೇಕು. ನಿರುದ್ಯೋಗಿ ಯುವಕ–ಯುವತಿಯರಿಗೆ ಉದ್ಯೋಗ ಸಿಗುವವರೆಗೂ ಸರ್ಕಾರ ನೀಡುವ ₹3ಸಾವಿರ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊಸದಾಗಿ ಮನೆ ಕಟ್ಟುವವರಿಗೆ ಮೀಟರ್ ಅಳವಡಿಸಲು ಸರ್ಕಾರದ ನಿಯಮಗಳ ಅನುಸಾರ ಅನುಮತಿ ಪಡೆಯುವುದು ಕಡ್ಡಾಯ. ಇದರ ಮಾರ್ಗದರ್ಶನದಂತೆಯೇ ಮನೆ ನಿರ್ಮಾಣ ಮಾಡಿರುವವರಿಗೆ ಮಾತ್ರ ಬೆಸ್ಕಾಂನಿಂದ ಮೀಟರ್ ನೀಡಲಾಗುವುದು ಎಂದು ಸಭೆಗೆ ಬೆಸ್ಕಾಂ ಎಇಇ ಸುಕುಮಾರ್ ರಾಜು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷ ರಫೀಕ್, ಸದಸ್ಯರಾದ ಸಿ.ಎಂ ಹರೀಶ್ ಕುಮಾರ್, ಬಿ.ವಿ ಶಂಕರ್, ವಿನೋದ್, ನಾರಾಯಣಸ್ವಾಮಿ, ಬೀರಪ್ಪ, ರೇಣುಕಮ್ಮ, ಸುಜಾತಮ್ಮ, ಲಕ್ಷ್ಮಮ್ಮ, ತಾ.ಪಂ ಇಒ ರವಿಕುಮಾರ್, ಬೆಸ್ಕಾಂ ಎಇಇ ಸುಕುಮಾರ್ ರಾಜು, ಸಮಾಜ ಕಲ್ಯಾಣಾಧಿಕಾರಿ ಅಂಜಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.