ಬೇತಮಂಗಲ: ಸತತ ಎರಡು ದಿನದಿಂದ ಸುರಿದ ಮಳೆಯಿಂದ ಗೋಸಿನಕೆರೆ ಕೋಡಿ ಹರಿಯುತ್ತಿದೆ. ಕೋಡಿ ನೀರು ಸಮರ್ಪಕವಾಗಿ ಹರಿಯಲು ರಾಜಕಾಲುವೆ ಇಲ್ಲದೆ ರಸ್ತೆ ಮೇಲೆ ಅರಿಯುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇತಮಂಗಲ ಗ್ರಾಮದಿಂದ ಕ್ಯಾಸಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಬ್ಯಾಟರಾಯನಹಳ್ಳಿ ಬಳಿ ಹಾದು ಹೋಗಿರುವ ಕಾರಿಡಾರ್ ರಸ್ತೆ ಸೇತುವೆ ಬಳಿ ಸಮರ್ಪಕ ರಾಜಕಾಲುವೆ ಹಾಗೂ ಚರಂಡಿ ಇಲ್ಲದೆ ರಸ್ತೆಯ ಮೇಲೆ ನೀರು ಹರಿದು, ರೈತರ ತೋಟಗಳಿಗೆ ನೀರು ನುಗ್ಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮತ್ತಷ್ಟು ಮಳೆ ಸುರಿದರೆ ನೀರಿನ ಮಟ್ಟ ಏರಿಕೆಯಾಗಿ ವಾಹನ ಸಂಚಾರ ಬಹುತೇಕ ಕಡಿತವಾಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ.
ರಾಜಕಾಲುವೆ ಸಂಪೂರ್ಣ ಒತ್ತುವರಿ: ಬೇತಮಂಗಲ ಗೋಸಿನಕರೆ ಕೋಡಿ ಅರಿಯುವ ನೀರಿನ ರಾಜಕಾಲುವೆಯನ್ನು ಪ್ರಭಾವಿಗಳು ಸಂಪೂರ್ಣ ಒತ್ತುವರಿಯಾಗಿದೆ. ಇದರಿಂದ ನೀರು ಸಮರ್ಪಕವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹಾಗೂ ಹೊಲಗಳಿಗೆ ನೀರು ನುಗ್ಗಿದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.