ADVERTISEMENT

ಬಿಜಿಎಂಎಲ್‌ ಬಂದ್‌: ಕರಾಳ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 13:33 IST
Last Updated 1 ಮಾರ್ಚ್ 2020, 13:33 IST
ಕೆಜಿಎಫ್‌ ಫೈಲೈಟ್ಸ್‌ ವೃತ್ತದ ಬಳಿ ಭಾನುವಾರ ಕೆಜಿಎಫ್‌ ಕರಾಳ ದಿನ ಒಕ್ಕೂಟದ ಕಾರ್ಯಕರ್ತರು ಗಣಿ ಮುಚ್ಚಿದ 20 ವರ್ಷದ ಅಂಗವಾಗಿ ಕರಾಳ ದಿನ ಆಚರಿಸಿದರು
ಕೆಜಿಎಫ್‌ ಫೈಲೈಟ್ಸ್‌ ವೃತ್ತದ ಬಳಿ ಭಾನುವಾರ ಕೆಜಿಎಫ್‌ ಕರಾಳ ದಿನ ಒಕ್ಕೂಟದ ಕಾರ್ಯಕರ್ತರು ಗಣಿ ಮುಚ್ಚಿದ 20 ವರ್ಷದ ಅಂಗವಾಗಿ ಕರಾಳ ದಿನ ಆಚರಿಸಿದರು   

ಕೆಜಿಎಫ್‌: ಭಾರತ್ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ (ಬಿಜಿಎಂಎಲ್‌) ಮುಚ್ಚಿ 20 ವರ್ಷವಾದ ಕಾರಣ ಭಾನುವಾರ ನಗರದ ಫೈಲೈಟ್ಸ್‌ ವೃತ್ತದಲ್ಲಿ ಕರಾಳ ದಿನ ಆಚರಣೆ ಮಾಡಲಾಯಿತು.

ಕೆಜಿಎಫ್‌ ಕರಾಳ ದಿನ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಬಿಜಿಎಂಎಲ್‌ ಅನ್ನು ರೋಗಗ್ರಸ್ಥ ಕೈಗಾರಿಕೆ ಎಂದು ಬಿಐಎಫ್‌ಆರ್ ಮುಚ್ಚಲು ಆದೇಶಿಸಿತು. ಕಾರ್ಮಿಕರ ಅಹವಾಲು ಕೇಳಿದ ನ್ಯಾಯಾಲಯಗಳು ಗಣಿ ಆರಂಭಿಸಲು ಆದೇಶಗಳನ್ನು ನೀಡಿತ್ತು. ಕೇಂದ್ರ ಸರ್ಕಾರ ಗಣಿ ಪುನರಾರಂಭಿಸಲು ಒಲವು ತೋರಿದ್ದರೂ, ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರ ಉದಾಸೀನ ತೋರುತ್ತಿವೆಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ನೆಲದಲ್ಲಿ ಇನ್ನೂ ಚಿನ್ನದ ನಿಕ್ಷೇಪಗಳು ಇವೆ. 280 ಎಕರೆ ಜಮೀನಿನಲ್ಲಿ ಇರುವ ಸೈನೈಡ್‌ ಗುಡ್ಡದಲ್ಲಿ ಕೂಡ ಚಿನ್ನದ ನಿಕ್ಷೇಪ ಇದೆ. ಹೈದರಾಬಾದಿನ ಪ್ರಯೋಗಾಲಯದಲ್ಲಿ ಇದು ದೃಢಪಟ್ಟಿದೆ. ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡಿದ ಬಿಜಿಎಂಎಲ್‌ ಅನ್ನು ಪುನಃ ಆರಂಭಿಸಲು ಕೂಡಲೇ ಆಸಕ್ತಿ ತೋರಬೇಕು ಎಂದು ಒತ್ತಾಯಿಸಿದರು.

ADVERTISEMENT

ನೂತನ ತಂತ್ರಜ್ಞಾನ ಬಳಸಿ ಚಿನ್ನವನ್ನು ಹೊರತೆಗೆಯಬೇಕು. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಇಲ್ಲವೇ ಸಹಭಾಗಿತ್ವದಲ್ಲಿ ಆದರೂ ಗಣಿಯನ್ನು ಪುನರಾರಂಭಿಸಬೇಕು. ಬಿಜಿಎಂಎಲ್‌ ವಶದಲ್ಲಿ ಇನ್ನೂ 7500 ಎಕರೆ ಜಮೀನು ಖಾಲಿಯಾಗಿದೆ. ಅದನ್ನು ಕೈಗಾರಿಕಾ ಪ್ರದೇಶವನ್ನಾಗಿ ಮಾಡಬೇಕು. ಚುನಾವಣೆ ಸಮಯದಲ್ಲಿ ಮಾತ್ರ ಬಿಜಿಎಂಎಲ್ ಬಗ್ಗೆ ಮಾತನಾಡುವ ರಾಜಕಾರಣಿಗಳು ಈಗ ಮೌನವಾಗಿದ್ದಾರೆ. ಸಾರ್ವಜನಿಕರ ಅಹವಾಲನ್ನು ಯಾರು ಆಲಿಸುತ್ತಿಲ್ಲ ಎಂದು ದೂರಿದರು.

ಮುಖಂಡರಾದ ರಮೇಶ್‌ ಲೋಕನಾಥನ್‌, ಸುರೇಶ್ ಬಾಬು, ಸಂತೋಷ್‌ಕುಮಾರ್‌, ಅರಿವಳಗನ್‌, ರಣಜಿತ್‌, ಶರಣ್‌, ರಾಮಮೂರ್ತಿ, ರಾಜಪ್ಪ, ಅಭಿಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.