ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಚಾಯಿತಿ ಕೊಳವೆ ಬಾವಿ ಅವ್ಯವಸ್ಥೆಯಿಂದ ಕೂಡಿದ್ದು ಕೂಡಲೇ ದುರಸ್ಥಿಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹೆಬ್ಬಣಿ ಪಂಚಾಯಿತಿ ಕುಡಿಯುವ ನೀರಿಗಾಗಿ ಗ್ರಾಮದ ಕೆರೆಯಲ್ಲಿ ಕೊಳವೆ ಬಾವಿ ತೋಡಿದ್ದು, ಕೊಳವೆ ಬಾವಿ ಮೋಟರ್ಗೆ ಅಳವಡಿಸಿರುವ ಪೈಪ್ಗಳನ್ನು ಸೂಕ್ತ ರೀತಿಯಲ್ಲಿ ಹಾಕದೆ ಕಲ್ಲುಗಳನ್ನು ಹಾಕಿ ಕಟ್ಟಲಾಗಿದೆ. ಜತೆಗೆ ಕೊಳವೆ ಬಾವಿ ಮೋಟರಿಗೆ ಅಳವಡಿಸಿರುವ ವಿದ್ಯುತ್ ಕೇಬಲನ್ನು ಯಾವುದೇ ರಕ್ಷಣೆ ಇಲ್ಲದೆ ಮೇಲೆಯೇ ಅಳವಡಿಸಲಾಗಿದೆ. ಅಲ್ಲಿ ಸದಾ ನೀರು ಸೋರಿಕೆಯಿಂದ ಹಲವು ವಸ್ತುಗಳು ತುಕ್ಕು ಹಿಡಿದಿವೆ.
ಕೆರೆಯಲ್ಲಿರುವ ಕೊಳವೆ ಬಾವಿಯ ಸ್ಟಾರ್ಟರ್ ಸಹ ಹಳೆಯ ಕಬ್ಬಿಣದ ಬಾಕ್ಸ್ನಲ್ಲಿ ಇಟ್ಟಿದ್ದು, ಮಳೆ, ಗಾಳಿ ಬಿಸಿಲಿಗೆ ಹಾಳಾಗುವ ಮುನ್ನ ಅದನ್ನು ಹೊಸ ಬಾಕ್ಸಿಗೆ ಹಾಕಿ. ಜತೆಗೆ ಕೊಳವೆ ಬಾವಿಯ ಪೈಪ್ಗಳನ್ನು ಚಿಲುಮೆಯಿಂದ ಸ್ವಚ್ಛಗೊಳಿಸಿ ಸೋರಿಕೆಯಾಗುವ ನೀರನ್ನು ತಡೆಯಬೇಕಾಗಿದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಪ್ರಸ್ತುತ ಹನಿ ನೀರಿಗೂ ಪರದಾಡುವಂತಾಗಿದ್ದು, ಇಂತಹ ಸಂದರ್ಭದಲ್ಲಿ ಕೊಳವೆಬಾವಿಯ ನೀರು ಸೋರಿಕೆಯಾಗಿ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹಾಗಾಗಿ ಕೊಳವೆಬಾವಿಗೆ ಹೊಸ ಪೈಪ್ಗಳನ್ನು ಅಳವಡಿಸಿ ರಕ್ಷಿಸಬೇಕಾಗಿದೆ.
ಹೆಬ್ಬಣಿ ಪಂಚಾಯಿತಿಗೆ ಒಂದು ತಿಂಗಳ ಹಿಂದೆಯಷ್ಟೇ ಕೆಲಸದ ವರದಿ ಮಾಡಿಕೊಂಡಿದ್ದೇನೆ. ಕೆರೆಯಲ್ಲಿರುವ ಕೊಳವೆಬಾವಿ ಅವ್ಯವಸ್ಥೆಯ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.ಗೌಸ್ ಸಾಬ್ ಪಿಡಿಒ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.