ADVERTISEMENT

ಕೋವಿಡ್‌: ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ವಹಿಸಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 15:51 IST
Last Updated 10 ಏಪ್ರಿಲ್ 2021, 15:51 IST
ಕೋಲಾರದಲ್ಲಿ ಶನಿವಾರ ನಡೆದ ವಾರ್ಷಿಕ ಶೈಕ್ಷಣಿಕ ಗುಣಮಟ್ಟದ ಸಮೀಕ್ಷಕರ ತರಬೇತಿ ಕಾರ್ಯಾಗಾರವನ್ನು ಬಿಇಒ ಕೆ.ಎಸ್.ನಾಗರಾಜಗೌಡ ಉದ್ಘಾಟಿಸಿದರು.
ಕೋಲಾರದಲ್ಲಿ ಶನಿವಾರ ನಡೆದ ವಾರ್ಷಿಕ ಶೈಕ್ಷಣಿಕ ಗುಣಮಟ್ಟದ ಸಮೀಕ್ಷಕರ ತರಬೇತಿ ಕಾರ್ಯಾಗಾರವನ್ನು ಬಿಇಒ ಕೆ.ಎಸ್.ನಾಗರಾಜಗೌಡ ಉದ್ಘಾಟಿಸಿದರು.   

ಕೋಲಾರ: ‘ಹಳ್ಳಿಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸಮೀಕ್ಷೆ ಜತೆಗೆ ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸಲಹೆ ನೀಡಿದರು.

ಜಾಗೃತಿ ಸೇವಾ ಸಂಸ್ಥೆ ಹಾಗೂ ಮೈಸೂರಿನ ಪ್ರಥಮ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಶೈಕ್ಷಣಿಕ ಗುಣಮಟ್ಟದ ಸಮೀಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಹಳ್ಳಿಗಳಲ್ಲಿ ಸಮೀಕ್ಷೆಯ ಜತೆಗೆ ಆರೋಗ್ಯವು ಮುಖ್ಯ. ಕೋವಿಡ್‌ ಆತಂಕ ಹೆಚ್ಚಿರುವುದರಿಂದ ಜಾಗೃತಿ ವಹಿಸಿ’ ಎಂದರು.

‘ಸಮೀಕ್ಷೆ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್‌ ಬಳಕೆ ಮಾಡಬೇಕು. ನಗರಗಳಲ್ಲಿ ವ್ಯಾಪಕವಾಗಿರುವ ಕೊರೊನಾ ಸೋಂಕು ಹಳ್ಳಿಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಸಮೀಕ್ಷೆ ವೇಳೆ ಪೋಷಕರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಿ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂಬ ಸತ್ಯ ಮನವರಿಕೆ ಮಾಡಿಕೊಡಿ’ ಎಂದು ತಿಳಿಸಿದರು.

ADVERTISEMENT

‘ಗ್ರಾಮ ಪಂಚಾಯಿತಿ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ಧಿಗೆ ಅವಕಾಶವಿದೆ. ಗ್ರಾ.ಪಂ ಸದಸ್ಯರ ಮೇಲೆ ಒತ್ತಡ ತಂದು ಅನುದಾನ ಪಡೆಯಿರಿ. ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರ ನೆರವು ಪಡೆಯಿರಿ’ ಎಂದು ಸಲಹೆ ನೀಡಿದರು.

‘ಹಳ್ಳಿಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹಳ್ಳಿಯ ವಾತಾವರಣ ಹಾಗೂ ಮುಗ್ಧ ಜನ ನಮ್ಮನ್ನು ಅಥಿತಿಗಳಂತೆ ಸತ್ಕರಿಸುವುದು ಸಂತಸದ ವಿಚಾರ’ ಎಂದು ಜಾಗೃತಿ ಸೇವಾ ಸಂಸ್ಥೆ ಸಂಸ್ಥಾಪಕ ಕೆ.ಆರ್.ಧನರಾಜ್ ಹೇಳಿದರು.

ಮುಸ್ಸಂಜೆ ಮನೆ ವೃದ್ಧಾಶ್ರಮದ ಶಾಂತಕುಮಾರಿ, ರಾಜಕುಮಾರಿ, ಚಂದ್ರಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.