ADVERTISEMENT

ಡಿ.ಸಿ ನಗರ ಪ್ರದಕ್ಷಿಣೆ: ಸಮಸ್ಯೆಯ ದಿಗ್ದರ್ಶನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 14:49 IST
Last Updated 17 ಸೆಪ್ಟೆಂಬರ್ 2019, 14:49 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಮಂಗಳವಾರ ನಗರ ಪ್ರದಕ್ಷಿಣೆ ನಡೆಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಮಂಗಳವಾರ ನಗರ ಪ್ರದಕ್ಷಿಣೆ ನಡೆಸಿದರು.   

ಕೋಲಾರ: ಇಲ್ಲಿ ಮಂಗಳವಾರ ವಿವಿಧ ವಾರ್ಡ್‌ಗಳಲ್ಲಿ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಮೂಲಸೌಕರ್ಯ ಸಮಸ್ಯೆಯ ದಿಗ್ದರ್ಶನವಾಯಿತು.

ನಗರದ ಬ್ರಾಹ್ಮಣರ ಬೀದಿ, ಕೀಲಾರಿಪೇಟೆ, ಶಾಂತಿನಗರ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೇಷ್ಮೆಗೂಡು ಮಾರುಕಟ್ಟೆ ಹಾಗೂ ಕಾರಂಜಿಕಟ್ಟೆ ಬಡಾವಣೆಗೆ ಬೆಳಿಗ್ಗೆ ಭೇಟಿ ನೀಡಿ ಜಿಲ್ಲಾಧಿಕಾರಿಯು ಸ್ಥಳೀಯರ ಅಹವಾಲು ಆಲಿಸಿದರು. ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಸೌಕರ್ಯ ಸಮಸ್ಯೆಯನ್ನು ಸಾರ್ವಜನಿಕರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಬಡಾವಣೆ ಹಾಗೂ ರಸ್ತೆಗಳ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ನಗರಸಭೆಯ ಆರೋಗ್ಯ ವಿಭಾಗದ ನಿರೀಕ್ಷಕಿ ಮರಿಯಾ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಯುಜಿಡಿ ಕಾಮಗಾರಿಗಾಗಿ ಬಡಾವಣೆ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಮುಗಿದು ವರ್ಷವಾದರೂ ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಲ್ಲ. ಕೆಯುಡಬ್ಲ್ಯೂಎಸ್‌ಡಿಬಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಗರಸಭೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಜೆಡಿಎಸ್‌ ಮುಖಂಡ ಶ್ರೀಕೃಷ್ಣ ದೂರಿದರು.

ರಾಜಕಾಲುವೆಯಲ್ಲಿ ಕಸ ತುಂಬಿಕೊಂಡಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ‘ನಗರಸಭೆ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದೀರಿ. ಅಂಗಡಿಯವರು ಮಾಂಸದ ತ್ಯಾಜ್ಯವನ್ನು ಮನಬಂದಂತೆ ಎಲ್ಲೆಂದರಲ್ಲಿ ಎಸೆದಿದ್ದಾರೆ. ಇದನ್ನು ಗಮನಿಸುವುದಿಲ್ಲವೇ’ ಎಂದು ಕೆಂಡಾಮಂಡಲರಾದರು.

‘ಯುಜಿಡಿ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಹಂತ ಹಂತವಾಗಿ ರಸ್ತೆ ದುರಸ್ತಿ ಮಾಡುತ್ತೇವೆ. ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ (ಸಿಎಒ) ಶಿವಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.