ಕೋಲಾರ: ‘ಸಂಸ್ಥೆಯು ರಸಗೊಬ್ಬರಗಳ ಬೆಲೆ ಕಡಿಮೆ ಮಾಡಿದ್ದು, ಇದು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗುತ್ತದೆ’ ಎಂದು ಇಫ್ಕೋ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಅತಿ ಹೆಚ್ಚು ರಸಗೊಬ್ಬರ ಉತ್ಪಾದನೆ ಮತ್ತು ಮಾರಾಟ ಇಫ್ಕೋ ಸಂಸ್ಥೆಯಿಂದ ನಡೆಯುತ್ತಿದೆ. ಸಂಸ್ಥೆಯು ವಾಣಿಜ್ಯ ವಹಿವಾಟಿನ ಜತೆಗೆ ಸಾಮಾಜಿಕ ಅಭಿವೃದ್ಧಿಗೂ ಒತ್ತು ನೀಡುತ್ತಿದೆ’ ಎಂದರು.
‘ಸಂಸ್ಥೆಯು ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪದೊಂದಿಗೆ ರಸಗೊಬ್ಬರಗಳ ಮಾರಾಟ ದರವನ್ನು ಕಡಿತಗೊಳಿಸಿದೆ. ಆ ಮೂಲಕ ಸಂಸ್ಥೆಯು ರೈತರಿಗೆ ಉತ್ತಮ ಕಾಣಿಕೆ ನೀಡಿದೆ’ ಎಂದು ಹೇಳಿದರು.
‘ಈ ಹಿಂದೆ ₹ 1,400 ಇದ್ದ 50 ಕೆ.ಜಿ ಡಿಎಪಿ ರಸಗೊಬ್ಬರದ ಬೆಲೆಯನ್ನು ಇದೀಗ ₹ 1,300 ಇಳಿಸಲಾಗಿದೆ. ಅದೇ ರೀತಿ 10–26–26 ಗೊಬ್ಬರದ ದರವನ್ನು ₹ 1,365ರಿಂದ ₹ 1,250ಕ್ಕೆ, 12–32–16 ಗೊಬ್ಬರದ ಬೆಲೆಯನ್ನು ₹ 1,375ರಿಂದ₹ 1,260ಕ್ಕೆ ಹಾಗೂ 20–20–0-13 ರಸಗೊಬ್ಬರದ ದರವನ್ನು ₹ 1,065ರಿಂದ ₹ 1 ಸಾವಿರಕ್ಕೆ ಇಳಿಸಲಾಗಿದೆ’ ಎಂದು ವಿವರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಇಫ್ಕೋ ಸಂಸ್ಥೆ ಅಧಿಕಾರಿ ಸತೀಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.