ADVERTISEMENT

ಠೇವಣಿ ಸಂಗ್ರಹ ವಿಳಂಭ: ತರಾಟೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:32 IST
Last Updated 16 ಫೆಬ್ರುವರಿ 2020, 13:32 IST
ಕೋಲಾರ ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ನಡೆದ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಮತ್ತು ಅಧ್ಯಕ್ಷರ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.
ಕೋಲಾರ ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ನಡೆದ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಮತ್ತು ಅಧ್ಯಕ್ಷರ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.   

ಕೋಲಾರ: ‘ಠೇವಣಿ ಸಂಗ್ರಹ ಗುರಿ ಸಾಧನೆ ಮಾಡದ ವಿಎಸ್‌ಎಸ್ ಮತ್ತು ಎಸ್‌ಎಫ್‌ಸಿಎಸ್ ಸಂಘಗಳ ಕಾರ್ಯದರ್ಶಿ ಮತ್ತು ಅಧ್ಯಕ್ಷರನ್ನು’ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತರಾಟೆಗೆ ತೆಗೆದುಕೊಂಡರು.

ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ನಡೆದ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಮತ್ತು ಅಧ್ಯಕ್ಷರ ಸಭೆಯಲ್ಲಿ ಮಾತನಾಡಿ, ‘ನೀವೆ ನಿಗದಿಪಡಿಸಿಕೊಂಡಿದ್ದ ಗುರಿ ಸಾಧನೆ ಮಾಡಿಲ್ಲ ಎಂದರೆ ಏನು ಅರ್ಥ, ಕೆಲಸ ಮಾಡಲು ಅಸಕ್ತಿಯಿಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ತಾಕೀತು ಮಾಡಿದರು.

‘ಇಚ್ಛಾಶಕ್ತಿ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಠೇವಣಿ ಸಂಗ್ರಹ ಅಗಿಲ್ಲ. ಕೆಲ ಮಹಿಳೆಯರು ಸ್ವಯಂ ಪ್ರೇರಿತರಾಗಿ ಬ್ಯಾಂಕಿನಲ್ಲಿ ಠೇವಣಿ ಇಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಹಿಳಾ ಸಂಘದ ಸದಸ್ಯರಿಗೆ ಜಾಗೃತಿ ಮೂಡಿಸಿದರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಬ್ಯಾಂಕ್ ನೀಡಿರುವ ಬೆಳೆ ಮತ್ತು ಮಹಿಳಾ ಸಂಘಗಳಿಗೆ ನೀಡಿರುವ ಸಾಲಕ್ಕೆ ಸರ್ಕಾರದಿಂದ ಬಂದಿರುವ ₨ ೧೪.೩೬ ಕೋಟಿ ಬಡ್ಡಿ ಹಣವನ್ನು 2 ಜಿಲ್ಲೆಗಳ ಸೊಸೈಟಿಗಳಿಗೆ ಹಂಚಿಕೆ ಮಾಡಲಾಗಲಾಗುವುದು. ಇದರಿಂದ ಸಹಕಾರಿ ಸಂಘಗಳು ಮತ್ತಷ್ಟು ಬಲವರ್ಧನೆಗೆ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಎರಡೂ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ (ಎಂಪಿಸಿಎಸ್) ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲಿ ತೆರೆಯಲು ಮತ್ತು ಉಳಿತಾಯ ಹಣ ಠೇವಣಿ ಇಡಲು ಮನವೊಲಿಸಬೇಕು. ಗುರಿ ಸಾಧನೆ ಮಾಡುವ ಮೂಲಕ ಮಾರ್ಚ್ ೧ರಂದು ನಡೆಯುವ ಸಭೆಗೆ ದಾಖಲೆಗಳ ಸಮೇತ ಬರಬೇಕು’ ಎಂದು ಸೂಚಿಸಿದರು.

‘ಡಿಸಿಸಿ ಬ್ಯಾಂಕ್ ಏನೆಲ್ಲಾ ಸಾಧನೆ ಮಾಡಿದ್ದರೂ ಠೇವಣಿ ಸಂಗ್ರಹದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಇದೆ. ಸೊಸೈಟಿ ಕಾರ್ಯದರ್ಶಿಗಳು ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಮಾಣಿಕವಾಗಿ ಕೆಲಸ ಮಾಡಿ. ಯಾವುದೇ ಸಾಲ ಸುಸ್ತಿ ಆಗದಂತೆ ಕ್ರಮವಹಿಸಬೇಕು’ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ರಚನೆಯಾಗಲಿದೆ. ಇದರಿಂದ ಈಗಿನಿಂದಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕು. ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಸೊಸೈಟಿಗಳು ಮತ್ತಷ್ಟು ಬಲಗೊಳ್ಳಬೇಕಾಗುತ್ತದೆ. ಹೊಸ ಬ್ಯಾಂಕ್ ಅಡಿಪಾಯವೇ ಠೇವಣಿ ಮತ್ತು ಠೇವಣಿ ಸಂಗ್ರಹ’ ಎಂದು ವಿವರಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಸಿ.ನೀಲಕಂಠೇಗೌಡ, ಹನುಮಂತರೆಡ್ಡಿ, ಎಸ್.ಸೋಮಶೇಖರ್, ಕೆ.ವಿ.ದಯಾನಂದ್, ಎಂ.ಎಲ್.ಅನಿಲ್ ಕುಮಾರ್, ಎಚ್.ನರಸಿಂಹರೆಡ್ಡಿ, ಕೆ.ಎಚ್.ಚನ್ನರಾಯಪ್ಪ, ಬಿ.ವಿ.ವೆಂಕಟರೆಡ್ಡಿ, ಎಚ್.ಎಸ್.ಮೋಹನ್‌ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಎಂ.ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.