ಬಂಗಾರಪೇಟೆ: ಸಮೃದ್ಧವಾಗಿ ಮರಗಿಡಗಳನ್ನು ಬೆಳೆಸಿದಾಗ ಮಾತ್ರ ಸಮೃದ್ಧವಾಗಿ ಮಳೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಚ್ಚು ಸಸಿ ನೆಟ್ಟು ಪೋಷಿಸಬೇಕು. ಮರಗಳನ್ನು ಉಳಿಸಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷ್ಮಿ ಹೇಳಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
‘ಹಸಿರೇ ಉಸಿರು ಅಂತ ಹೇಳಬಹುದು. ಆದರೆ ಇಂದು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ಇದರಿಂದ ಮುಂದಿನ ದಿನದಲ್ಲಿ ದುಷ್ಪಾರಿಮ ಎದುರಿಸಬೇಕಾಗುತ್ತದೆ. ಪರಿಸರವನ್ನು ರಕ್ಷಣೆ ಎಲ್ಲರ ಜವಾಬ್ದಾರಿ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಬೇಕು’ ಎಂದರು.
ಉತ್ತಮ ಪರಿಸರದಿಂದ ಮಾತ್ರ ಜೀವ ಸಂಕುಲ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಪ್ರಕೃತಿ ಸಂಪತ್ತನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಜತೆಗೆ ಅದರ ರಕ್ಷಣೆಯೂ ನಮ್ಮದಾಗಿದೆ. ಈ ಬಗ್ಗೆ ಜನರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ನ್ಯಾಯಾಧೀಶ ಚಂದ್ರಶೇಖರ್ ಅಲಬೂರ್, ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಹಾಗೆಯೇ ಮನಸೋ ಇಚ್ಚೆ ಮರಗಿಡಗಳನ್ನು ಕಡಿದು ಹಾಕಿ, ಕೇವಲ ಪರಿಸರ ದಿನದಂದು ಮಾತ್ರ ಗಿಡ ನೆಟ್ಟು ಮರೆಯವುದು ಸರಿಯಲ್ಲ ಎಂದರು.
ಪರಿಸರದ ನಾಶದಿಂದ ಅಸಮರ್ಪಕ ಮಳೆ, ಜಾಗತಿಕ ತಾಪಮಾನ ಏರಿಕೆ, ಆರೋಗ್ಯದಲ್ಲಿ ಏರುಪೇರು ಮುಂತಾದ ಸಮಸ್ಯೆಗಳು ಕಾಡುತ್ತಿವೆ. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.
ನ್ಯಾಯಾಧೀಶ ಸುಕೀತಾ ಎಸ್. ಹದ್ದಿ, ವಕೀಲರ ಸಂಘ ಅಧ್ಯಕ್ಷ ಎಸ್. ನಾರಾಯಣಪ್ಪ, ಉಪವಲಯ ಅರಣ್ಯಾಧಿಕಾರಿ ನಾಗೇಶ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಜಯಣ್ಣ, ವಕೀಲ ಅಮರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.