ಕೋಲಾರ: ತಾಲ್ಲೂಕಿನ ಕುಂಬಾರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಇತ್ತೀಚಿಗೆ ಕೆರೆಗೆ ಭೇಟಿ ನೀಡಿ ವೀಕ್ಷಿಸಿದರು.
ಸಣ್ಣ ನೀರಾವರಿ ಇಲಾಖೆ ಎಂಜನಿಯರ್ಗಳಿಂದ ಮಾಹಿತಿ ಪಡೆದು, ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು, ಒಂದು ಕಾಲಮಿತಿಯೊಳಗೆ ಕಲಸ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ‘೨೭ ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ಸಿಎಸ್ಆರ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗಿದ್ದು, ಕ್ರಿಯಾ ಯೋಜನೆ ತಯಾರಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
‘ಸಿಎಸ್ಆರ್ ಅಡಿಯಲ್ಲಿ ಹೋಂಡಾ ಕಂಪನಿಯವರು ಪ್ರಮುಖವಾಗಿ ಮುಂದೆ ಬಂದಿದ್ದು, ಬೆಮೆಲ್ನವರು ಡೋಜರ್ಗಳನ್ನು ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಈ ಕೆರೆಗೆ ಕೆಸಿವ್ಯಾಲಿ ಯೋಜನೆಯಡಿ ನೀರು ಬರುವುದಿಲ್ಲ. ಆದರೂ, ನಮ್ಮ ಕಚೇರಿ ಸಮೀಪದಲ್ಲೇ ಇರುವುದರಿಂದ ಇದನ್ನು ಅಭಿವೃದ್ಧಿಪಡಿಸಿ, ಗಿಡಮರಗಳನ್ನು ಬೆಳೆಸಿ ಉತ್ತಮ ವಾತಾವರಣ ನಿರ್ಮಿಸಲು ಚಿಂತಿಸಲಾಗಿದೆ’ ಎಂದು ಹೇಳಿದರು.
‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಕೆರೆಯನ್ನು ಕೆಲವರು ಸ್ವಲ್ಪ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಅದಕ್ಕಾಗಿ ಸರ್ವೇ ಮಾಡಿಸಲಾಗಿದೆ. ತೆರವುಗೊಳಿಸಿ, ಹಳ್ಳಗಳನ್ನು ಸಮತಟ್ಟು ಮಾಡಲಾಗುವುದು. ನೀರು ಹರಿಯಲು ಕಾಲುವೆ ನಿರ್ಮಿಸಲಾಗುವುದು, ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಕೆಸಿವ್ಯಾಲಿಯಿಂದ ನೀರು ಹರಿಸಲು ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.
ನಗರಸಭೆ ಆಯುಕ್ತ ಶ್ರೀಕಾಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.