ADVERTISEMENT

ಜಯನಗರ ನಿವಾಸಿಗಳಿಗೆ ತರಕಾರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 15:13 IST
Last Updated 31 ಮಾರ್ಚ್ 2020, 15:13 IST
ಸಿಎಂಆರ್‌ ಮಂಡಿ ಮಾಲೀಕ ಶ್ರೀನಾಥ್‌ ಹಾಗೂ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಕೋಲಾರದ ಜಯನಗರ  ನಿವಾಸಿಗಳಿಗೆ ಮಂಗಳವಾರ ತರಕಾರಿ ವಿತರಿಸಿದರು.
ಸಿಎಂಆರ್‌ ಮಂಡಿ ಮಾಲೀಕ ಶ್ರೀನಾಥ್‌ ಹಾಗೂ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಕೋಲಾರದ ಜಯನಗರ  ನಿವಾಸಿಗಳಿಗೆ ಮಂಗಳವಾರ ತರಕಾರಿ ವಿತರಿಸಿದರು.   

ಕೋಲಾರ: ಕೊರೊನಾ ಸೋಂಕಿನ ತಡೆಗಾಗಿ ಕೇಂದ್ರ ಸರ್ಕಾರ ದಿಗ್ಬಂಧನ ಘೋಷಣೆ ಮಾಡಿರುವ ಕಾರಣಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಎಪಿಎಂಸಿಯ ಸಿಎಂಆರ್‌ ಮಂಡಿ ವತಿಯಿಂದ ನಗರದ ಜಯನಗರ ಬಡಾವಣೆ ನಿವಾಸಿಗಳಿಗೆ ಮಂಗಳವಾರ ಉಚಿತವಾಗಿ ತರಕಾರಿ ವಿತರಿಸಲಾಯಿತು.

ದಿಗ್ಬಂಧನದ ಹಿನ್ನೆಲೆಯಲ್ಲಿ ನಗರವಾಸಿಗಳು ಅಗತ್ಯ ವಸ್ತುಗಳಿಗಾಗಿ ಪರಿತಪಿಸುತ್ತಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿದ ಸಿಎಂಆರ್‌ ಮಂಡಿ ಮಾಲೀಕ ಶ್ರೀನಾಥ್‌ ಅವರು ಜಯನಗರಕ್ಕೆ ವಾಹನದಲ್ಲಿ ತರಕಾರಿ ಸಾಗಿಸಿಕೊಂಡು ಬಂದು ಹಂಚಿದರು.

‘ನಗರದ ಜನ ದಿಗ್ಬಂಧನದ ಆದೇಶ ಸರಿಯಾಗಿ ಪಾಲಿಸುತ್ತಿಲ್ಲ. ಮನೆಗಳಲ್ಲೇ ಇರುವಂತೆ ಜಾಗೃತಿ ಮೂಡಿಸಿದರೂ ಜನ ಮನೆಯಿಂದ ಹೊರಬಂದು ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಜನರು ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಮನೆಯಿಂದ ಹೊರ ಬರುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ತರಕಾರಿ ತಂದು ಕೊಡುತ್ತಿದ್ದೇವೆ’ ಎಂದು ನಗರಸಭೆ 14ನೇ ವಾರ್ಡ್‌ ಸದಸ್ಯ ಎಸ್.ಆರ್.ಮುರಳಿಗೌಡ ಹೇಳಿದರು.

ADVERTISEMENT

‘ಬಡಾವಣೆ ನಿವಾಸಿಗಳಿಗೆ ಅಗತ್ಯವಿರುವ ತರಕಾರಿ ಮತ್ತು ದಿನಬಳಕೆ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ. ದಿಗ್ಬಂಧನ ಅಂತ್ಯಗೊಳ್ಳುವವರೆಗೂ ಈ ಸೇವೆ ಮುಂದುವರಿಸುತ್ತೇವೆ. ಜಗತ್ತಿನೆಲ್ಲೆಡೆ ಜನ ಕೋವಿಡ್‌–19 ಕಾಯಿಲೆಯಿಂದ ತತ್ತರಿಸಿದ್ದಾರೆ. ಕೊರೊನಾ ಸೋಂಕು ನಿವಾರಣೆಗೆ ಜಾರಿಯಾಗಿರುವ ದಿಗ್ಬಂಧನದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಈ ಕಾರಣಕ್ಕೆ ನಿರ್ಲಕ್ಷ್ಯ ತೋರಿವುದು ಸರಿಯಲ್ಲ. ಹಣ್ಣು, ತರಕಾರಿ, ಅಗತ್ಯ ವಸ್ತುಗಳ ಖರೀದಿಗಾಗಿ ಜನ ಗುಂಪು ಗುಂಪಾಗಿ ಮಾರುಕಟ್ಟೆಗೆ ಬರಬಾರದು’ ಎಂದು ಸಲಹೆ ನೀಡಿದರು.

ಬಿಜಿಪಿ ಮುಖಂಡ ಸತ್ಯನಾರಾಯಣರಾವ್, ವಕೀಲ ಪಿ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.