ADVERTISEMENT

ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ ಸೇವಿಸಿ: ಡಾ.ಮಾಧವಿ ರೆಡ್ಡಿ

ಆಹಾರ ನಿರ್ವಹಣೆಗೆ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 3:42 IST
Last Updated 25 ಜನವರಿ 2022, 3:42 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ನ್ಯೂಟ್ರಿಷಿಯನ್ ವಿಭಾಗದಿಂದ ಪೌಷ್ಟಿಕಾಂಶ ಭರಿತ ಆಹಾರ ನಿರ್ವಹಣೆ ಕುರಿತ ಜಾಗೃತಿ ಭಿತ್ತಿಪತ್ರವನ್ನು ಕಾಲೇಜಿನ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ.ಮಾಧವಿ ರೆಡ್ಡಿ ಪ್ರದರ್ಶಿಸಿದರು
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ನ್ಯೂಟ್ರಿಷಿಯನ್ ವಿಭಾಗದಿಂದ ಪೌಷ್ಟಿಕಾಂಶ ಭರಿತ ಆಹಾರ ನಿರ್ವಹಣೆ ಕುರಿತ ಜಾಗೃತಿ ಭಿತ್ತಿಪತ್ರವನ್ನು ಕಾಲೇಜಿನ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ.ಮಾಧವಿ ರೆಡ್ಡಿ ಪ್ರದರ್ಶಿಸಿದರು   

ಕೋಲಾರ: ‌‘ಪೌಷ್ಟಿಕಾಂಶಭರಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯದ ಜತೆಗೆ ರೋಗ ನಿರೋಧಕ ಶಕ್ತಿಯೂ ದೇಹದಲ್ಲಿ ಹೆಚ್ಚಲಿದೆ. ಇದಕ್ಕಾಗಿ ಹಣ್ಣು, ತರಕಾರಿ, ಸೊಪ್ಪು ಸೇವಿಸಬೇಕು’ ಎಂದು ದೇವರಾಜ ಅರಸು ವೈದ್ಯಕೀಯ ಕಾಲೇಜಿನ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ.ಮಾಧವಿ ರೆಡ್ಡಿ ತಿಳಿಸಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಕೋಲಾರ ನ್ಯೂಟ್ರಿಷಿಯನ್ ಎಜುಕೇಷನ್ ಇಂಟ್ರವೆನ್‍ಷನ್ ಕಾರ್ಯಕ್ರಮದಡಿ ಪೌಷ್ಟಿಕಾಂಶಭರಿತ ಆಹಾರ ನಿರ್ವಹಣೆ ಕುರಿತ ಜಾಗೃತಿ ಭಿತ್ತಿಪತ್ರ ಪ್ರದರ್ಶಿಸಿ ಅವರು ಮಾತನಾಡಿದರು.

‘ಪೌಷ್ಟಿಕಾಂಶದ ಕೊರತೆ ತಪ್ಪಿಸಿ ಆಹಾರವೂ ನಿಮ್ಮ ಔಷಧವಾಗಲಿ’ ಎಂಬ ಧ್ಯೇಯವಾಕ್ಯದೊಂದಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಉತ್ತಮ ಆಹಾರ ಸೇವನೆ ಕುರಿತು ಮಕ್ಕಳು, ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಬಾಲಕರು ಮತ್ತು ಬಾಲಕಿಯರಿಗೆ ವಯಸ್ಸಿಗೆ ಅನುಗುಣವಾಗಿ ಪ್ರತಿನಿತ್ಯ ಸೇವಿಸಬೇಕಾದ ಆಹಾರದ ಚಾರ್ಟ್ ನೀಡಿದ ಅವರು, ಉತ್ತಮ ಆಹಾರದಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ
ಎಂದರು.

ಹಣ್ಣು, ಮೊಳಕೆ ಕಾಳು, ಹಸಿ ಕ್ಯಾರೆಟ್, ಮೊಟ್ಟೆ, ಹಾಲು ಸೇವನೆಯಿಂದ ಅಪೌಷ್ಟಿಕತೆ ನಿವಾರಣೆಯಾಗಲಿದೆ. ಜೊತೆಗೆ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ
ನೀಡಿದರು.

ಮುಖ್ಯಶಿಕ್ಷಕ ಸಿ.ಎನ್. ಪ್ರದೀಪ್‍ಕುಮಾರ್, ಮಕ್ಕಳಲ್ಲಿನ ಅಪೌಷ್ಟಿಕತೆ ಇಂದು ಇಡೀ ವಿಶ್ವವನ್ನೇ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಸರ್ಕಾರ ಇದರ ನಿವಾರಣೆಗೆ ಅನೇಕ ಪ್ರಯತ್ನಗಳನ್ನು ನಡೆಸುತ್ತಿದೆ. ಗರ್ಭಿಣಿಯರು, ಬಾಣಂತಿಯರಲ್ಲಿ ಉತ್ತಮ ಆರೋಗ್ಯ, ಅಪೌಷ್ಟಿಕತೆ ನಿವಾರಣೆಗೆ ಅಗತ್ಯ ಯೋಜನೆ ರೂಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಲಕ್ಷ್ಮಣ್, ವೈದ್ಯಕೀಯ ಕಾಲೇಜಿನ ಸಾಹಿತಿ, ರಕ್ಷಿತಾ, ಕಾವ್ಯಾ, ಸೀಮಾ, ಎಸ್‍ಡಿಎಂಸಿ ಅಧ್ಯಕ್ಷ ಎ. ಮಹೇಂದ್ರ, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಸಿದ್ದೇಶ್ವರಿ, ಗೋಪಾಲಕೃಷ್ಣ, ಭವಾನಿ, ಲೀಲಾ, ಶ್ವೇತಾ, ಸುಗುಣಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಡಿ. ಚಂದ್ರಶೇಖರ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.