ADVERTISEMENT

ಸ್ವ ಉದ್ಯೋಗಕ್ಕೆ ಒತ್ತು ನೀಡಿ: ಬಿ.ರಾಜೇಂದ್ರನ್

ಕೈಗಾರಿಕೆಗಳ ಸಚಿವಾಲಯದ ಸಹಾಯಕ ನಿರ್ದೇಶಕ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 13:04 IST
Last Updated 2 ಫೆಬ್ರುವರಿ 2020, 13:04 IST
ಕೋಲಾರದಲ್ಲಿ ಸೂಕ್ಷ್ಮ, ಸಣ್ಣಕೈಗಾರಿಕೆಗಳ ಮಹತ್ವ ಕುರಿತು ಭಾನುವಾರ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೋಲಾರದಲ್ಲಿ ಸೂಕ್ಷ್ಮ, ಸಣ್ಣಕೈಗಾರಿಕೆಗಳ ಮಹತ್ವ ಕುರಿತು ಭಾನುವಾರ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.   

ಕೋಲಾರ: ‘ವಿದ್ಯಾವಂತ ಯುವಕರು ಸರ್ಕಾರಿ ಕೆಲಸಕ್ಕೆ ಕಾಯದೆ, ಸ್ವಯಂ ಉದ್ಯೋಗಕ್ಕೆ ಒತ್ತು ನೀಡುವ ಮೂಲಕ ಮತ್ತಷ್ಟು ಮಂದಿಗೆ ಉದ್ಯೋಗ ಕಲ್ಪಿಸಲು ಮುಂದಾಗಬೇಕು’ ಎಂದು ಮೈಕ್ರೋ, ಸಣ್ಣ, ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಸಹಾಯಕ ನಿರ್ದೇಶಕ ಬಿ.ರಾಜೇಂದ್ರನ್ ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಮೈಕ್ರೋ, ಸಣ್ಣ, ಮಧ್ಯಮ ಕೈಗಾರಿಕೆಗಳ ಸಂಸ್ಥೆಯಿಂದ ಸೂಕ್ಷ್ಮ, ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಮಹತ್ವ ಕುರಿರು ಇಲ್ಲಿನ ಭಾನುವಾರ ನಡೆದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ‘ಉದ್ಯೋಗಕ್ಕಾಗಿ ಅನೇಕ ಅವಕಾಶಗಳಿವೆ, ವಿದ್ಯೆ ಜತೆಗೆ ಕೌಶಲ ತರಬೇತಿ ಪಡೆದುಕೊಂಡರೆ ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಶಿಕ್ಷಣ ಎಂದರೆ ಇತ್ತೀಚಿಗೆ ಸರ್ಕಾರಿ ಉದ್ಯೋಗಕ್ಕಾಗಿ ಎನ್ನುವಂತಾಗಿರುವುದು ವಿಷಾದಕರ ಸಂಗತಿ. ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೊಗ ಬಯಸುವ ಜತೆಗೆ ಸ್ವಾವಲಂಬನೆಗೆ ಮಹತ್ವ ನೀಡುವಂತಾಗಬೇಕು’ ಎಂದು ತಿಳಿಸಿದರು.

ADVERTISEMENT

ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ರವಿಚಂದ್ರ ಮಾತನಾಡಿ, ‘ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕುಗಳು ಸಾಲ ನೀಡುತ್ತಿದೆ. ಇದರಿಂದ ಸರ್ಕಾರಿ ಉದ್ಯೋಗಕ್ಕೆ ಕಾಯದೇ ಸ್ವಾವಲಂಬಿಗಳಾಗಲು ಯುವಕರು ಮುಂದೆ ಬರಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ 6 ತಾಲ್ಲೂಕುಗಳಿಂದ ಚಿತ್ರಕಲಾ ಸ್ವರ್ಧೆಗೆ ೫೬ ಹಾಗೂ ಪ್ರಬಂಧ ಸ್ವರ್ಧೆಗೆ ೨೬ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪ್ರತಿ ಸ್ವರ್ಧೆಗೂ ಪ್ರಥಮ ಬಹುಮಾನ 10 ಸಾವಿರ ರು., ದ್ವಿತೀಯ ಬಹುಮಾನ 7500 ರು, ತೃತೀಯ ಬಹುಮಾನ 5ಸಾವಿರ ರು. ನೀಡಲಾಯಿತು.

ಸ್ಪರ್ಧೆ ವಿಜೇತರು

ಪ್ರಬಂಧ ಸ್ಪರ್ಧೆಯಲ್ಲಿ ನೂತನ ಸರ್ಕಾರಿ ಪ್ರೌಢಶಾಲೆಯ ಎ.ಅಮೃತಾ ಪ್ರಥಮ, ಶ್ರೀನಿವಾಸಪುರ ತಾಲ್ಲೂಕು ತಾಡಿಗೋಳ್ ಸರ್ಕಾರಿ ಪ್ರೌಢ ಶಾಲೆಯ ಸಿಂಧೂರಾಣಿ ದ್ವಿತೀಯ ಹಾಗೂ ಆಲವಾಟ ಸರ್ಕಾರಿ ಪ್ರೌಢ ಶಾಲೆಯ ಎಂ.ಎಸ್.ಕಾವ್ಯ ತೃತೀಯ ಸ್ಥಾನ ಪಡೆದುಕೊಂಡರು.

ಚಿತ್ರಕಲಾ ಸ್ವರ್ಧೆಯಲ್ಲಿ ತಾಲ್ಲೂಕಿನ ಮೇಡಿಹಾಳ ಸರ್ಕಾರಿ ಪ್ರೌಢ ಶಾಲೆಯ ಎಂ.ಶ್ವೇತಾ ಪ್ರಥಮ, ಶ್ರೀನಿವಾಸಪುರ ತಾಲ್ಲೂಕು ಆಲವಾಟ ಶಾಲೆಯ ಎಂ.ಸಾಗರ್ ದ್ವಿತೀಯ ಹಾಗೂ ಕೆಜಿಎಫ್ ನಗರದ ಸರ್ಕಾರಿ ಪ್ರೌಢಶಾಲೆಯ ತಮಿಳರಸನ್ ತೃತೀಯ ಸ್ಥಾನ ಪಡೆದುಕೊಂಡರು.

ಸಣ್ಣ ಕೈಗಾರಿಕೆಗಳ ಒಕ್ಕೂಟದ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ, ಪ್ರಾಂಶುಪಾಲ ರುದ್ರಪ್ಪ, ವಿಷಯ ಪರಿವೀಕ್ಷಕರಾದ ಬಿ.ವೆಂಕಟೇಶಪ್ಪ, ಶಿಕ್ಷಕರಾದ ಬಿ.ವಾಣಿ, ಸುಬ್ರಮಣಿ, ಕಾಳಿದಾಸ, ಶಂಕರಪ್ಪ, ಬಿ.ವಾಣಿ, ನಾಗರಾಜ್, ಶಿವಾಜಿರಾವ್, ರಮೇಶ್, ಪ್ರೇಮಕುಮಾರ್, ರಾಜಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.