ADVERTISEMENT

ಜಿಲ್ಲೆಯಲ್ಲಿ ರೈಲು ವರ್ಕ್‌ ಶಾಪ್ ಸ್ಥಾಪನೆ ಶತ ಸಿದ್ಧ

ಮಾಜಿ ಸಂಸದ ಕೆ.ಚ್.ಮುನಿಯಪ್ಪ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ವಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 12:02 IST
Last Updated 9 ಫೆಬ್ರುವರಿ 2020, 12:02 IST

ಕೋಲಾರ: ‘ಜಿಲ್ಲೆಯ ಶ್ರೀನಿವಾಸಪುರ ಬಳಿ ರೈಲು ಬೋಗಿ ತಯಾರಿಕಾ ಕಾರ್ಖಾನೆ ಬದಲು ದುರಸ್ತಿ ಕಾರ್ಯಾಗಾರ ಸ್ಥಾಪಿಸುವುದು ಶತ ಸಿದ್ಧ. ವಿರೋಧ ಪಕ್ಷಗಳ ಬೆದರಿಕೆಗೆ ಜಗ್ಗುವ ಪ್ರಶ್ನೆಯಿಲ್ಲ’ ಎಂದು ಸಂಸದ ಎಸ್.ಮುನಿಸ್ವಾಮಿ ಗುಡುಗಿದರು.

ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾರ್ಖಾನೆಯನ್ನು ಸ್ಥಳಾಂತರ ಮಾಡುತ್ತಿಲ್ಲ, ಇದರ ಬದಲಿಗೆ ದುರಸ್ತಿ ಕಾರ್ಯಾಗಾರ ಬದಲು ಸ್ಥಾಪನೆಯಿಂದ ಜಿಲ್ಲೆಯಲ್ಲಿ 10 ಸಾವಿರ ಮಂದಿಗೆ ಉದ್ಯೋಗದ ಅವಕಾಶ ಸಿಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ದುರಸ್ತಿ ಕಾರ್ಯಾಗಾರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಅಕ್ರಮಕೈಗೊಂಡಿದೆ. ಅನಗತ್ಯವಾಗಿ ವಿರೋಧ ಪಕ್ಷದವರು ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದು ಬಿಟ್ಟು ಹೋರಾಟ ಮಾಡಿದರೆ ಹೆದರುವವರು ಯಾರು ಇಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ರೈಲು ಬೋಗಿ ತಯಾರಿಕ ಕಾರ್ಖಾನೆ ಸ್ಥಾಪನೆಗೆ ಕ್ರಮಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಒಳ್ಳೆ ಕೆಲಸ ಮಾಡುವಾಗ ಅಡ್ಡಿ ಪಡಿಸುವವರು ಇದ್ದೆ ಇರುತ್ತಾರೆ. ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುವವರಿಗೆಲ್ಲ ಪ್ರತಿಕ್ರಿಯಿಸಲ್ಲ’ ಎಂದು ಹೇಳಿದರು.

‘ದೇಶದಲ್ಲಿ ರೈಲು ಬೋಗಿಗಳಿಗೆ ಬೇಡಿಕೆಯಿಲ್ಲ, ಜಿಲ್ಲೆಗೆ ಮಂಜೂರಾಗಿರುವ ಕಾರ್ಖಾನೆ ಬದಲಿಗೆ ದುರಸ್ತಿ ಕಾರ್ಯಾಗಾರ ಸ್ಥಾಪನೆ ಮಾಡಲಾಗುವುದು. ಕಾರ್ಖಾನೆ ಸ್ಥಾಪನೆ ಮಾಡಿದರೆ ಹೆಚ್ಚಿನ ಜನಕ್ಕೆ ಉದ್ಯೋಗ ಸಿಗುತ್ತದೆ ಎಂಬ ಅಭಿಪ್ರಾಯ ಸರ್ಕಾರದ ಗಮನಕ್ಕೂ ತಂದಿದೆ. ದೇಶಕ್ಕೆ ಅಗತ್ಯವಿರುವ ಯೋಜನೆ ಜಾರಿಗೊಳಿಸಿದರೆ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

‘ನಾನು ಸಹ ಮೈದಾನದಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳಲು ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸುವ ಮೂಲಕ ಹೋರಾಟದ ಎಚ್ಚರಿಗೆ ನೀಡಿದ್ದಾರೆ. ಇದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಹಿರಿತನಕ್ಕೆ ಗೌರವ ತರುವಂತದಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಸಹ ಇದೇ ಜಿಲ್ಲೆಯ ಮಾಲೂರಿನ ನಿವಾಸಿ. ಜನರ ಅಶೀರ್ವಾದದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಚುನಾವಣೆಯಲ್ಲಿ ಜನ ತಿರಸ್ಕರಿಸಿದರೂ ಅದನ್ನು ಸ್ವೀಕರಿಸಬೇಕು. ಸೋಲಿನ ನೋವಿನಲ್ಲಿ ಜನರನ್ನು ದಿಕ್ಕು ತಪ್ಪಿಸಲು ಹೇಳಿಕೆ ನೀಡಿದರೆ ಯಾರು ಕೇಳುವುದಿಲ್ಲ, 7 ಭಾರಿ ಸಂಸದರಾಗಿರುವವರು ಜವಾಬ್ದಾರಿಯಿಂದ ಮಾತನಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.