ADVERTISEMENT

ಕೋಲಾರ: ವಿವಿಧೆಡೆ ಗಣೇಶೋತ್ಸವಕ್ಕೆ ಅಡ್ಡಿ; ಪ್ರತಿಭಟನೆ

ಹಿಂದೂಗಳ ಮೇಲೆಯೇ ದಬ್ಬಾಳಿಕೆ ಆರೋಪ–ರಾಜ್ಯಪಾಲರಿಗೆ ದೂರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 7:01 IST
Last Updated 12 ಸೆಪ್ಟೆಂಬರ್ 2025, 7:01 IST
ಕೋಲಾರದ ತಾಲ್ಲೂಕು ಕಚೇರಿಯ ಮುಂಭಾಗ ಗುರುವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಕೋಲಾರದ ತಾಲ್ಲೂಕು ಕಚೇರಿಯ ಮುಂಭಾಗ ಗುರುವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಕೋಲಾರ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅಡ್ಡಿಪಡಿಸುತ್ತಿರುವುದಕ್ಕೆ ಹಾಗೂ ವಿಶ್ವ ಹಿಂದೂ ಪರಿಷತ್‌ ಸಹ ಕಾರ್ಯದರ್ಶಿ ಶರಣ್‌ ಪಂಪ್‍ವೆಲ್ ಅವರು ಉತ್ಸವದಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಕೂಡಲೇ ಕ್ರಮ ವಹಿಸುವಂತೆ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮುಖಂಡರು ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕಾಗಿ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕಾರಣರಾದರು. ಅಂದಿನಿಂದ ಇಂದಿನವರೆಗೂ ಉತ್ಸವ ಸಾರ್ವಜನಿಕ ಸ್ಥಳಗಳಲ್ಲಿ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಪ್ರತಿ ಹಂತದಲ್ಲೂ ಗಣೇಶೋತ್ಸವಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸಿದೆ. ಅನಗತ್ಯ ನಿಯಮ ಜಾರಿ ಮಾಡಿ ಗಣೇಶೋತ್ಸವ ತಡೆಯಲು ಪ್ರಯತ್ನ ಮಾಡಿದೆ’ ಎಂದು ಆರೋಪಿಸಿದರು.

ADVERTISEMENT

ಕೆಲವು ಕಡೆ ಧ್ವನಿವರ್ಧಕ ಬಳಸಲು ನಿಷೇಧ ಹೇರಿದೆ. ಮದ್ದೂರು, ಸಾಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಗಣೇಶ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆಯ ಮೇಲೆ ಅಲ್ಪಸಂಖ್ಯಾತ ಸಮುದಾಯದ ಕೆಲ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಇದರ ವಿರುದ್ಧ ರಾಜ್ಯದ ಪೊಲೀಸರು ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದು, ಹಿಂದೂಗಳ ಮೇಲೆಯೇ ದಬ್ಬಾಳಿಕೆ ನಡೆಯುತ್ತಿದೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರ ಮೇಲೆ ವಿಧಿಸಿರುವ ಜಿಲ್ಲಾ ಪ್ರವೇಶ ನಿರ್ಬಂಧವನ್ನು ಕೂಡಲೇ ಹಿಂಪಡೆಯಬೇಕು, ಗಣೇಶ ಶೋಭಾಯಾತ್ರೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಕಲ್ಲು ತೂರಾಟ ನಡೆಸಿದ ಕಡೆಗಳಲ್ಲಿ ಡ್ರೋಣ್ ಕ್ಯಾಮೆರಾ ಅಳವಡಿಸಬೇಕು, ಶೋಭಾ ಯಾತ್ರೆ–ಮೆರವಣಿಗೆಗಳು ಸಂಭ್ರಮದಿಂದ ನಡೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಜರಂಗದಳ, ವಿಹಿಂಪ ಮುಖಂಡರಾದ ಬಾಲಾಜಿ, ಬಾಬು, ಮುಂಜುನಾಥ್ ಮುದ್ದಪ್ಪ, ಜಿಲ್ಲಾ ಸಂಚಾಲಕ ಆರ್.ವಿಶ್ವನಾಥ್, ಗ್ರಾಮಾಂತರ ಸಂಚಾಲಕ ಶ್ರೀಧರ್, ನಗರ ಘಟಕದ ವಿಶ್ವನಾಥ್, ಮುಳಬಾಗಿಲು ವಿಶ್ವ, ಮಣಿ, ಬಂಗಾರಪೇಟೆ ವಿಶ್ವ, ಭವಾನಿ, ವಿನಯ್, ಕಾಶಿ, ಗೋವಿಂದ, ಲಡ್ಡು, ಸಾಯಿಮೌಳಿ, ಮಂಜು, ಮಹೇಶ್, ಅಡಿಕೆ ನಾಗ, ಓಂಪ್ರಕಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.