ADVERTISEMENT

ಮಾಲೂರು: ಶಿಕ್ಷಕಿಗೆ ಥಳಿಸಿದ ಪೋಷಕನ ಮೇಲೆ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 17:20 IST
Last Updated 12 ಸೆಪ್ಟೆಂಬರ್ 2025, 17:20 IST
<div class="paragraphs"><p>ಶಿಕ್ಷಕಿ ಮಂಜುಳಾ</p></div>

ಶಿಕ್ಷಕಿ ಮಂಜುಳಾ

   

ಮಾಲೂರು (ಕೋಲಾರ): ತಾಲ್ಲೂಕಿನ ಟೇಕಲ್‌ ಹೋಬಳಿಯ ಕ್ಷೇತ್ರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದಲ್ಲಿ ಪೋಷಕರೊಬ್ಬರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಶಾಲೆಯ 6 ನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಬಂಗಾರಪೇಟೆ ತಾಲ್ಲೂಕಿನ ಪಲವತಿಮ್ಮನಹಳ್ಳಿ ಗ್ರಾಮದ ಶಿಕ್ಷಕಿ ಮಂಜುಳಾ ಎಸ್‌. (45) ಎಂಬುವರ ಮೇಲೆ ಅದೇ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪೋಷಕ ಚೌಡಪ್ಪ ಎಂಬುವರು ಶುಕ್ರವಾರ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವುದನ್ನು ಸಿಬ್ಬಂದಿಯೊಬ್ಬರು ವಿಡಿಯೊ ಮಾಡಿಕೊಂಡಿದ್ದಾರೆ.

ADVERTISEMENT

ಈ ಸಂಬಂಧ ಶಿಕ್ಷಕಿಯು ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡಿರುವ ಶಿಕ್ಷಕಿ, ಮಾಲೂರು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಲೆಗೆ ಹೊಡೆದು ಹೊರದಬ್ಬಿದ:

‘ಪರೀಕ್ಷಾವಧಿಯಾಗಿದ್ದು, ಗುರುವಾರ ಶಾಲೆಯಲ್ಲಿ ಹಾಜರಾತಿ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯು ಶಾಲೆಗೆ ಬಂದ. ಎರಡು ದಿನಗಳಿಂದ ಗೈರಾಗಿದ್ದಕ್ಕೆ ಕಾರಣ ಕೇಳಿದೆ. ಕನ್ನಡ ಪರೀಕ್ಷೆ ಇದ್ದು, ಏನು ಬರೆಯುತ್ತೀಯಾ ಎಂದು ವಿಚಾರಿಸಿದೆ. ಓದಿಲ್ಲವೆಂದೂ, ಪರೀಕ್ಷೆ ಬರೆಯುದಿಲ್ಲವೆಂದೂ ಆತ ಹೇಳಿದ. ವಿದ್ಯಾರ್ಥಿ ಕೈಗೆ ನನ್ನ ಕೈಯಿಂದ ಹೊಡೆದೆ. ಕೋಲು ತೆಗೆದುಕೊಳ್ಳಲು ಮುಂದಾದಾಗ ತಾಯಿಯನ್ನು ಕರೆದುಕೊಂಡು ಬರುವುದಾಗಿ ಓಡಿ ಹೋದ. ಕೆಲವೇ ನಿಮಿಷಗಳಲ್ಲಿ ಆತ ತನ್ನ ತಂದೆ ಚೌಡಪ್ಪ ಅವರನ್ನು ಕರೆತಂದ. ನಾನು ಆಗ ಬೋರ್ಡ್‌ನಲ್ಲಿ ಬರೆಯುತ್ತಿದ್ದೆ. ಶಾಲೆಯಿಂದ ಹೊರನಡಿ ಎಂದು ಚೌಡಪ್ಪ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಕೈ ಮಾಡಿದರು. ನನ್ನನ್ನು ಎಳೆದಾಡಿ ಕೊಠಡಿಯ ಕಬ್ಬಿಣದ ಬಾಗಿಲಿನತ್ತ ದೂಡಿದರು. ಬಾಗಿಲಿಗೆ ಬಡಿದಿದ್ದರಿಂದ ನನ್ನ ತಲೆ ಹಾಗೂ ಬೆನ್ನಿಗೆ ಏಟು ಬಿತ್ತು. ಕಾಲಿನಿಂದ ಒದ್ದರು’ ಎಂದು ಶಿಕ್ಷಕಿ ಮಂಜುಳಾ ದೂರು ನೀಡಿದ್ದಾರೆ.

ಶಿಕ್ಷಕಿ ಮೇಲೆ ಹಲ್ಲೆ ಖಂಡನೀಯ:

‘ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಆತನ ತಂದೆ ಚೌಡಪ್ಪ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ. ಸಮಸ್ಯೆ ಇದ್ದಲ್ಲಿ ಇಲಾಖೆಗೆ ದೂರು ನೀಡಬೇಕು. ಶಿಕ್ಷಕರ ಮೇಲೆ ಈ ರೀತಿ ಘಟನೆಗಳು ಮ ರುಕಳಿಸಬಾರದು . ಈಗಾಗಲೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗೆ ಶಿಕ್ಷೆಯಗಬೇಕು’ ಎಂದು ಮಾಲೂರು ಬಿಇಒ ಕೆಂಪಯ್ಯಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.