ADVERTISEMENT

ಕೋಲಾರ: ಮುಖ್ಯಮಂತ್ರಿಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 16:54 IST
Last Updated 5 ಮಾರ್ಚ್ 2019, 16:54 IST
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಮಂಗಳವಾರ ಕೋಲಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ಅರಾಭಿಕೊತ್ತನೂರು ಗೇಟ್‌ ಬಳಿ ರಸ್ತೆ ಪಕ್ಕ ನಿಂತಿದ್ದ ಜೆಡಿಎಸ್‌ ಕಾರ್ಯಕರ್ತರತ್ತ ಕೈ ಬೀಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಮಂಗಳವಾರ ಕೋಲಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ಅರಾಭಿಕೊತ್ತನೂರು ಗೇಟ್‌ ಬಳಿ ರಸ್ತೆ ಪಕ್ಕ ನಿಂತಿದ್ದ ಜೆಡಿಎಸ್‌ ಕಾರ್ಯಕರ್ತರತ್ತ ಕೈ ಬೀಸಿದರು.   

ಕೋಲಾರ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಮಂಗಳವಾರ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ಕಾರ್ಯಕರ್ತರು ತಾಲ್ಲೂಕಿನ ಅರಾಭಿಕೊತ್ತನೂರು ಸಮೀಪ ಭವ್ಯ ಸ್ವಾಗತ ಕೋರಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದರು. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಸುಮಾರು 2 ತಾಸು ತಡವಾಗಿ ಜಿಲ್ಲೆಗೆ ಆಗಮಿಸಿದರು.

ಸುಡು ಬಿಸಿಲಿನಲ್ಲೇ ಗಂಟೆಗಟ್ಟಲೇ ಕಾದು ನಿಂತಿದ್ದ ಜೆಡಿಎಸ್‌ ಕಾರ್ಯಕರ್ತರು ಕುಮಾರಸ್ವಾಮಿಯವರ ವಾಹನ ಬರುತ್ತಿದ್ದಂತೆ ಜಯಘೋಷ ಮೊಳಗಿಸಿದರು. ಕುಮಾರಸ್ವಾಮಿ ಹಾಗೂ ಎಚ್‌.ಡಿ.ದೇವೇಗೌಡರ ಪರ ಜೈಕಾರ ಕೂಗಿದರು.

ADVERTISEMENT

ಅರಾಭಿಕೊತ್ತನೂರು ಗೇಟ್‌ನಿಂದ ನಗರದ ಹೊರವಲಯದ ಕೋಚಿಮುಲ್‌ವರೆಗೂ ರಾಷ್ಟ್ರೀಯ ಹೆದ್ದಾರಿ 75ರ ಇಕ್ಕೆಲಗಳಲ್ಲಿ ಕುಮಾರಸ್ವಾಮಿಯವರ ಬೃಹತ್‌ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಸ್ವಾಗತ ಕೋರುವ ಫ್ಲೆಕ್ಸ್‌ಗಳು ಮತ್ತು ಜೆಡಿಎಸ್‌ ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಕಾರ್ಯಕರ್ತರು ರಸ್ತೆಯ ಅಕ್ಕಪಕ್ಕ ನಿಂತು ಕುಮಾರಸ್ವಾಮಿ ಅವರತ್ತ ಕೈಬೀಸಿದರು.

ಮುಖ್ಯಮಂತ್ರಿಯವರು ಹಲವೆಡೆ ಕಾರು ನಿಲ್ಲಿಸಿ ಕಾರ್ಯಕರ್ತರಿಗೆ ಹಸ್ತಲಾಘವ ನೀಡಿದರು. ಕಾರ್ಯಕರ್ತರು ಕುಮಾರಸ್ವಾಮಿ ಅವರಿಗೆ ಬೃಹತ್ ಹೂಗುಚ್ಚ ನೀಡಿ ಮತ್ತು ಹೂವಿನ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ದಯಾನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.