ADVERTISEMENT

ಕಠಿಣ ಪರಿಶ್ರಮ ಸಫಲತೆಯ ಕೀಲಿಕೈ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:32 IST
Last Updated 17 ಮೇ 2019, 13:32 IST
ಕೋಲಾರದಲ್ಲಿ ಶುಕ್ರವಾರ ನಡೆದ ಗೋಕುಲ ಕಾಲೇಜಿನ ಘಟಿಕೋತ್ಸವದಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಕೆ.ಜನಾರ್ದನಮ್ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಗೋಕುಲ ಕಾಲೇಜಿನ ಘಟಿಕೋತ್ಸವದಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಕೆ.ಜನಾರ್ದನಮ್ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು.   

ಕೋಲಾರ: ‘ಶಿಕ್ಷಣದಿಂದ ಆರ್ಥಿಕ ಸಫಲತೆ ಕಾಣುವುದರ ಜತೆಗೆ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಸಚಿವ (ಮೌಲ್ಯಮಾಪನ) ಕೆ.ಜನಾರ್ದನಮ್ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಗೋಕುಲ ಕಾಲೇಜು ಘಟಿಕೋತ್ಸವದಲ್ಲಿ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಘಟಿಕೋತ್ಸವವು ಸ್ಮರಣೀಯ ದಿನ. ಇದು ಸಾಂಪ್ರದಾಯಿಕ ವಿದ್ಯಾಭ್ಯಾಸದ ಅಂತ್ಯವೆನಿಸಿದರೂ ನೈಜ ಬದುಕಿನ ಆರಂಭ ಎಂಬುದನ್ನು ಮರೆಯುವಂತಿಲ್ಲ’ ಎಂದರು.

‘ಭಾರತ ದೇಶವು ಹೆಚ್ಚಿನ ಪ್ರಮಾಣದಲ್ಲಿ ಯುವಕ ಯುವತಿಯರನ್ನು ಹೊಂದಿದೆ. ಪದವೀಧರ ಯುವಕ ಯುವತಿಯರು ಜಾಗತಿಕ ಸವಾಲು ಸಮರ್ಥವಾಗಿ ಎದುರಿಸಿ ಸಮಾಜದಲ್ಲಿ ಮೌಲ್ಯ ಬಿತ್ತುವ ಜವಾಬ್ದಾರಿ ನಿಭಾಯಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಸರಿ ತಪ್ಪು ಅರ್ಥೈಸುವುದೇ ವಿದ್ಯಾಭ್ಯಾಸವಾಗಿದೆ. ಕೌಶಲಾಭಿವೃದ್ಧಿಯೂ ಶಿಕ್ಷಣದ ಭಾಗವಾಗಬೇಕು. ಭವಿಷ್ಯದ ನಾಯಕತ್ವ ವಹಿಸುವ ಚಾಕಚಕ್ಯತೆಯನ್ನು ಪದವೀಧರ ವಿದ್ಯಾರ್ಥಿಗಳು ಹೊಂದಬೇಕು. ಕಠಿಣ ಪರಿಶ್ರಮಕ್ಕೆ ಪರ್ಯಾಯವೇ ಇಲ್ಲ. ಬದುಕಿನ ಗುರಿ ತಲುಪಲು ಕಠಿಣ ಪರಿಶ್ರಮವೇ ಸಫಲತೆಯ ಕೀಲಿಕೈ. ವಿದ್ಯಾಭ್ಯಾಸದ ಅವಧಿಯಲ್ಲಿನ ಕಠಿಣ ಪರಿಶ್ರಮವನ್ನು ಜೀವನದಲ್ಲೂ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಶಿಕ್ಷಣದಿಂದ ರಾಷ್ಟ್ರದ ಸುಸ್ಥಿರ ಅಭಿವೃದ್ದಿಯಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ಇರುವಂತಾಗಬೇಕು. ಸಮಾಜ ವಿದ್ಯಾರ್ಥಿಗಳನ್ನು ಸ್ಮರಿಸುವ ರೀತಿಯಲ್ಲಿ ನಡೆದುಕೊಂಡರೆ ಮಾತ್ರ ಪದವಿ ಪಡೆದದ್ದಕ್ಕೂ ಸಾರ್ಥಕ’ ಎಂದು ಅಭಿಪ್ರಾಯಪಟ್ಟರು.

ಕೊಡುಗೆ ನೀಡಬೇಕು: ‘ಬದುಕಿಗಿಂತ ದೊಡ್ಡ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ ಸಿಗುವುದಿಲ್ಲ. ವಿದ್ಯಾರ್ಥಿಗಳು ನಾಲ್ಕು ಗೋಡೆ ಮಧ್ಯೆ ಪದವಿ ಪಡೆಯುತ್ತೀರಿ. ಆದರೆ, ಬದುಕುವುದನ್ನು ಕಲಿಯದಿದ್ದರೆ ಜೀವನ ಸರಿ ದಾರಿಯಲ್ಲಿ ಸಾಗುವುದಿಲ್ಲ. ಸ್ವಾರ್ಥಕ್ಕಾಗಿ ಶಿಕ್ಷಣ ಪಡೆಯುವುದಲ್ಲ. ಕಲಿತ ವಿದ್ಯೆಯಿಂದ ತಂದೆ ತಾಯಿ, ಕುಟುಂಬಕ್ಕೂ ಒಳ್ಳೆಯದಾಗಬೇಕು. ದೇಶಕ್ಕೂ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಗೋಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಕಾಲೇಜಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಅಸ್ಮಾ, ಪ್ರಾಂಶುಪಾಲ ಎಚ್.ಬಿ.ಮಹೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.