
ಮುಳಬಾಗಿಲು: ‘ಕೇವಲ ನನ್ನ ಅವಧಿಯಲ್ಲಿ ಮಾತ್ರ ರಸ್ತೆಗಳು ಹದಗೆಟ್ಟಿವೆಯೇ? ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ಎಚ್.ನಾಗೇಶ್ ಅವಧಿಯಲ್ಲಿ ರಸ್ತೆಗಳು ಹಾಳಾಗಿಲ್ಲವೇ ? ಕಾರ್ಯಕ್ರಮಗಳಿಗೆ ನನ್ನನ್ನು ಕರೆದು ಏಕೆ ಅವಮಾನ ಮಾಡುತ್ತೀರಿ’ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಗುಮ್ಮಕಲ್ಲು ಗ್ರಾಮದಲ್ಲಿ ಭಾನುವಾರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಸಮಸ್ಯೆಗಳು ಬಂದವೇ? ಎಚ್.ನಾಗೇಶ್ ಹಾಗೂ ಕೊತ್ತೂರು ಮಂಜುನಾಥ್ ಅವಧಿಯಲ್ಲಿ ಯಾವುದೇ ರಸ್ತೆಗಳು ಹದಗೆಟ್ಟೇ ಇಲ್ಲವೇ. ಕೇವಲ ಎರಡೂವರೆ ವರ್ಷದಲ್ಲಿ ಇಷ್ಟೊಂದು ಸಮಸ್ಯೆ ಏರ್ಪಟ್ಟಿದೆಯೇ?. ಇದನ್ನೇ ಯೂಟ್ಯೂಬ್ ಚಾನಲ್ಗಳು ಏಕೆ ಬಿಂಬಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ’ ಎಂದು ಕುಟುಕಿದರು.
‘ನಾನು ಬೇರೆ ತಾಲ್ಲೂಕಿನಿಂದ ಬಂದು, ನನ್ನ ಸ್ವಂತ ತಾಲ್ಲೂಕು ಶ್ರೀನಿವಾಸಪುರಕ್ಕೆ ಏನೋ ಎತ್ತಿಕೊಂಡು ಹೋಗುತ್ತಾನೆ ಎಂದು ಮಾತನಾಡಿಕೊಳ್ಳುತ್ತಾರೆ. ಸರ್ಕಾರವೇ ನನ್ನ ಬೇಡಿಕೆಗಳಿಗೆ ಸ್ಪಂದಿಸದೆ ಇರುವಾಗ ನಾನು ಏನು ಎತ್ತಿಕೊಂಡು ಹೋಗುತ್ತೇನೆ’ ಎಂದರು.
‘ತಾಲ್ಲೂಕಿನ ಅಭಿವೃದ್ಧಿಗೆ ₹46 ಕೋಟಿ ಅನುದಾನಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ, ಆದರೂ ನೀಡುತ್ತಿಲ್ಲ. ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ ₹86 ಕೋಟಿ ಅನುದಾನ ಕೇಳಿದ್ದೇನೆ. ಅದು ನೀಡುತ್ತಿಲ್ಲ. ಎಲ್ಲೇ ನೂತನ ಪಂಚಾಯಿತಿ ಕಟ್ಟಡ ನಿರ್ಮಾಣವಾದರೂ ನನ್ನ ವೈಯಕ್ತಿಕವಾಗಿ ಅನುದಾನ ನೀಡುತ್ತಿದ್ದೇನೆ’ ಎಂದರು.
‘ಮುಖ್ಯಮಂತ್ರಿಗಳು ನನಗೆ ಅರ್ಜಿ ಕಳುಹಿಸಿ ಈಗಾಗಲೇ ನೀಡಿರುವ ಅನುದಾನದಲ್ಲಿ ಶೇ 22 ರಷ್ಟು ಅನುದಾನ ವಾಪಸ್ ನೀಡಿ ಎಂದು ಕೇಳುತ್ತಿದ್ದಾರೆ. ನಾನು ಏನು ಮಾಡಲಿ’ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಕೃಷ್ಣಮೂರ್ತಿ, ಕೆ.ಎನ್.ಪ್ರಕಾಶ್, ರಘುಪತಿ ರೆಡ್ಡಿ, ಎನ್.ಆರ್.ಸತ್ಯಣ್ಣ, ಶಂಕರ್ ರೆಡ್ಡಿ, ನಾರಾಯಣ ರೆಡ್ಡಿ, ಬಾಲಪ್ಪ, ದೇವರಾಜ್, ರಾಜೇಗೌಡ, ಪಿಡಿಒ ಚಿಕ್ಕನರಸಿಂಹಯ್ಯ, ಕಾರ್ಯದರ್ಶಿ ವಿಶ್ವನಾಥ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.