
ಮುಳಬಾಗಿಲು: ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆಯ ವತಿಯಿಂದ ನಂಗಲಿಯಲ್ಲಿ ಗುರುವಾರ ಸಂಜೆ ಸಬ್ ಇನ್ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ ನೇತೃತ್ವದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಬಳಸುವ ಕುರಿತು ಜಾಗೃತಿ ಅಭಿಯಾನ ನಡೆಯಿತು.
ನಂಗಲಿ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆ, ಗಣೇಶನ ಗುಡಿ ಬೀದಿ, ಬಜಾರು ರಸ್ತೆ, ಮಲ್ಲೆಕುಪ್ಪ ರಸ್ತೆ, ದ್ರೌಪದಮ್ಮ ಗುಡಿ ಬೀದಿ, ಕುವೆಂಪು ರಸ್ತೆ, ಅಂಬೇಡ್ಕರ್ ನಗರ ಮತ್ತಿತರ ಕಡೆ ಪೊಲೀಸ್ ಸಿಬ್ಬಂದಿ ‘ಹೆಲ್ಮೆಟ್ ಬಳಸಿ ಪ್ರಾಣ ಉಳಿಸಿ’ ಎಂಬ ಘೋಷ ವಾಕ್ಯದ ಬ್ಯಾನರ್ ಹಿಡಿದು ಜಾಗೃತಿ ಮೂಡಿಸಿದರು.
ಅಭಿಯಾನದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಬಳಸುವ ಕುರಿತು ಪ್ರತಿಜ್ಞೆ ವಿಧಿ ಬೋಧಿಸಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ ಮಾತನಾಡಿ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನಿನ ಪ್ರಕಾರ ಅಪರಾಧ ಎಂದರು.
ಈಗಾಗಲೇ ಅನೇಕ ಕಡೆ ಹೆಲ್ಮೆಟ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಆದರೂ, ಹೆಲ್ಮೆಟ್ ಇಲ್ಲದೆ ಬೇಜವಾಬ್ದಾರಿಯಿಂದ ಸವಾರರು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಡಿ.1ರಿಂದ ಹೆಲ್ಮೆಟ್ ಇಲ್ಲದೆ ಪ್ರಯಾಣಸಿದರೆ ದಂಡದ ಜೊತೆಗೆ ಪ್ರಕರಣ ದಾಖಲಿಸಿ ವಾಹನ ವಶಕ್ಕೆ ಪಡೆಯಲಾಗುವುದು ಎಂದರು.
18 ವರ್ಷ ವಯಸ್ಸಿನ ಒಳಗಿನ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನ ವಶಕ್ಕೆ ಪಡೆದು ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗುವುದು. ಬೈಕ್ ವೀಲ್ಹಿಂಗ್, ಮದ್ಯಪಾನ ಮಾಡಿ ವಾಹನ ಚಾಲನೆ, ಕರ್ಕಶ ಸೈಲೆನ್ಸರ್ ಬಳಕೆ ಕಂಡು ಬಂದಲ್ಲಿ ಸ್ಥಳದಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಂಕರಪ್ಪ, ಪವನ್ ಕುಮಾರ್, ನಂಗಲಿ ಅಶೋಕ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.