ADVERTISEMENT

ಬಂಗಾರಪೇಟೆ | ಕೆರೆ ಮಣ್ಣು ಅಕ್ರಮ ‌ಸಾಗಣೆ: ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 7:26 IST
Last Updated 23 ಜೂನ್ 2025, 7:26 IST
ಬಂಗಾರಪೇಟೆ ತಾಲ್ಲೂಕಿನ ಬನಹಳ್ಳಿ ಕೆರೆಯಲ್ಲಿ ಬೃಹತ್‌ ನಿರ್ಮಾಣ ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು
ಬಂಗಾರಪೇಟೆ ತಾಲ್ಲೂಕಿನ ಬನಹಳ್ಳಿ ಕೆರೆಯಲ್ಲಿ ಬೃಹತ್‌ ನಿರ್ಮಾಣ ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು   

ಬಂಗಾರಪೇಟೆ: ತಾಲ್ಲೂಕಿನ ಹಲವು ಕೆರೆಗಳಲ್ಲಿ ಇಟ್ಟಿಗೆ ಕಾರ್ಖಾನೆ ಮಾಲೀಕರು ಹಾಗೂ ಇತರರು ಅಕ್ರಮವಾಗಿ ಮಣ್ಣು ತೆಗೆಯುವ ಮೂಲಕ ಕೆರೆಗಳ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ. ಕೆರೆಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು.

ತಾಲ್ಲೂಕಿನ ಬೂದಿಕೋಟೆ ಹೋಬಳಿ ಗಾಜಗ, ಬನಹಳ್ಳಿ, ಗುಟ್ಟಹಳ್ಳಿ, ರಾಮಸಂದ್ರ ಗ್ರಾಮಗಳ ಕೆಲವು ಕೆರೆಗಳಲ್ಲಿ ಪ್ರಭಾವಿಗಳು ಹಾಡಹಗಲೇ ರಾಜಾರೋಷವಾಗಿ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯದೆ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಬಳಸಿ ಇಟ್ಟಿಗೆ ಕಾರ್ಖಾನೆ, ಅನಧಿಕೃತ ಲೇಔಟ್ ನಿರ್ಮಾಣ, ತೋಟಗಳಿಗೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡುತ್ತಿದ್ದಾರೆ.

ಕೆರೆ ಕುಂಟೆ ಸರಿಯಾಗಿ ಇದ್ದರೆ ಮಾತ್ರ ಮಳೆ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಆದರೆ, ಕೆಲವು ಜನರು ಹಣದಾಸೆಗೆ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣುಗಾರಿಕೆ ಮಾಡುವ ಮೂಲಕ ಕೆರೆಗಳ ನಾಶಕ್ಕೆ ಮುಂದಾಗಿದ್ದಾರೆ.

ADVERTISEMENT

ಬೇಸಿಗೆ ಕಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಿತ್ಯ ಜೆಸಿಬಿಯೊಂದಿಗೆ ಹತ್ತಾರು ಟ್ರ್ಯಾಕ್ಟರ್‌ ಬಳಸಿ ಮಣ್ಣು ತೆಗೆಯುವ ದಂಧೆ ಹೆಚ್ಚಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಮೈರಾಡ ಸಂಸ್ಥೆ ಹಾಗೂ ಸೀಗಲ್ ಸಂಸ್ಥೆಗಳು ಸೇರಿದಂತೆ ಇತರ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೆರೆಗಳಲ್ಲಿ ಇರುವ ಹೂಳು ತೆಗೆದು ಕೆರೆಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಕೆಲವರು ಅಕ್ರಮ ಮಣ್ಣುಗಾರಿಕೆಯಿಂದ ಹಣ ಸಂಪಾದಿಸಲು ಕೆರೆಗಳನ್ನು ಹಾಳು ಮಾಡಲು ಹೊರಟಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಬನಹಳ್ಳಿ ಕೆರೆಯಲ್ಲಿ ಬೃಹತ್‌ ನಿರ್ಮಾಣ ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು

ಮಣ್ಣು ತೆಗೆಯುವವರು ವಾರದ ರಜೆ ದಿನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಂದಾಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರಜೆ ಇದ್ದರೆ ಸ್ಥಳಕ್ಕೆ ಬರುವುದಿಲ್ಲ ಎಂಬ ಮುಂದಾಲೋಚನೆಯಿಂದ ಮಣ್ಣು ಎತ್ತುವುದು ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಅಕ್ರಮ ಮಣ್ಣುಗಾರಿಕೆಯಲ್ಲಿ ತೊಡಗಿರುವವರನ್ನು ಸಾರ್ವಜನಿಕರು ತಡೆದು ಮಣ್ಣು ತೆಗೆಯುವವರನ್ನು ಪ್ರಶ್ನಿಸಿದರೆ ‘ನಾವು ಪರವಾನಗಿ ಪಡೆದಿದ್ದೇವೆ’ ಎಂದು ಸಾಬೂನು ಹೇಳುವ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದು ಇದ್ದರಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಮೂಲಕ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಬನಹಳ್ಳಿ ಕೆರೆಯಲ್ಲಿ ಬೃಹತ್‌ ನಿರ್ಮಾಣ ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು
ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ತೆಗೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲುವ ಮೂಲಕ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಅಂತರ್ಜಲ ಮಟ್ಟ ಸಂರಕ್ಷಣೆಗಾಗಿ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಹುಣಸನಹಳ್ಳಿ
ಎನ್.ವೆಂಕಟೇಶ್ ಕರ್ನಾಟಕ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ
ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ತೆಗೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲುವ ಮೂಲಕ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಅಂತರ್ಜಲ ಮಟ್ಟ ಸಂರಕ್ಷಣೆಗಾಗಿ ಕೆರೆಗಳನ್ನು ಸಂರಕ್ಷಣೆ ಮಾಡಬೇಕು
ಹುಣಸನಹಳ್ಳಿ ಎನ್.ವೆಂಕಟೇಶ್ ಕರ್ನಾಟಕ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ
ಮಣ್ಣು ಅವೈಜ್ಞಾನಿಕವಾಗಿ ಕೆರೆಗಳಿಂದ ತೆಗೆಯಲಾಗುತ್ತಿದೆ. ಜಾನುವಾರುಗಳಿಗೆ ನೀರಿಲ್ಲ. ಮಕ್ಕಳು ಯುವಕರು ಯಾರಾದರೂ ಕೆರೆ ಪಾಲಾದರೆ ಅವರ ಶವ ಹುಡುಕಲು ಕೂಡ ಕಷ್ಟ
ನಾರಾಯಣಗೌಡ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ
ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ. ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ. ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ
ನೀಲಿ ಮಂಜುನಾಥ ಬೂದಿಕೋಟೆ
ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದು ಪರಿಸರಕ್ಕೆ ಹಾನಿಕಾರಕ. ಕೆಲವು ನಿಯಮಗಳನ್ನು ಪಾಲಿಸಬೇಕು. ಅಕ್ರಮವಾಗಿ ಮಣ್ಣು ತೆಗೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
ಎಸ್.ವೆಂಕಟೇಶಪ್ಪ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.