ಕೋಲಾರ: ‘ದೇಶದಲ್ಲಿ ಆಹಾರ ಸ್ವಾವಲಂಬನೆಗೆ ಅಪಾರ ಕೊಡುಗೆ ನೀಡಿದ ಬಾಬು ಜಗಜೀವನರಾಮ್ ಅವರ ದೇಶಪ್ರೇಮ, ಬದ್ಧತೆ ಇಂದಿನ ಸಮಾಜಕ್ಕೆ ಆದರ್ಶವಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿ ಮಂಗಳವಾರ ಡಿಡಿಪಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿ, ‘ಜಗಜೀವನರಾಮ್ ಅವರು ದೇಶದ ಉಪ ಪ್ರಧಾನಿಯಾಗಿ, ಕೃಷಿ ಸಚಿವರಾಗಿ ನೀಡಿದ ಕೊಡುಗೆ ಪ್ರಶಂಸನೀಯ. ಭಾರತ ಆಹಾರ ಸ್ವಾವಲಂಬನೆಯಲ್ಲಿ ದಿಟ್ಟ ಹೆಜ್ಜೆ ಇಡಲು ಅವರೇ ಕಾರಣ’ ಎಂದು ಸ್ಮರಿಸಿದರು.
‘ರಾಷ್ಟ್ರದ ಇತಿಹಾಸದಲ್ಲಿ ಅಂಬೇಡ್ಕರ್ ಅವರಂತೆಯೇ ಜಗಜೀವನರಾಮ್ ಅವರು ಶೋಷಣೆ ವಿರುದ್ಧ ಧ್ವನಿಯೆತ್ತಿದವರು, ಶೋಷಿತ ಸಮಾಜದ ಅಭಿವೃದ್ಧಿಗೆ ಕಂಕಣ ತೊಟ್ಟು ಕೆಲಸ ಮಾಡಿದವರು. ಅಂಬೇಡ್ಕರ್, ಜಗಜೀವನರಾಮ್ ಅವರಂತಹ ಮಹನೀಯರ ಜಯಂತಿಯನ್ನು ಆಚರಣೆಗೆ ಸೀಮಿತಗೊಳಿಸದೆ ಅವರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಸಮಾನತೆ ಬಗ್ಗೆ ಧ್ವನಿ ಎತ್ತಿದ ಜಗಜೀವನರಾಮ್ ಹಿಂದುಳಿದ ಸಮಾಜಕ್ಕೆ ದಾರಿದೀಪವಾಗಿದ್ದವರು. ಪ್ರತಿಭೆಯು ಯಾವುದೇ ವರ್ಗಕ್ಕೆ ಸೀಮಿತವಲ್ಲ. ಶಿಕ್ಷಣಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ಹೀಗಾಗಿ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.
ಡಿವೈಪಿಸಿ ಗಂಗರಾಮಯ್ಯ, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಎವೈಪಿಸಿಗಳಾದ ಮೋಹನ್ ಬಾಬು, ಸಿದ್ದೇಶ್ ಹಾಗೂ ಕಚೇರಿ ಸಿಬ್ಬಂದಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.