ಕೋಲಾರ: ಸಮಾಜ ಹಾಗೂ ಮಾನವನ ಏಳಿಗೆ ಆಗಬೇಕಾದರೆ ಅದು ವಿಜ್ಞಾನದಿಂದಮಾತ್ರ ಸಾಧ್ಯ. ವಿಜ್ಞಾನವಿಲ್ಲದೆ ಯಾವುದೇ ಕಾರ್ಯ ವ್ಯವಸ್ಥಿತವಾಗಿ ಸಾಗಲಾರದು ಎಂದು ಶಾಸಕ ಕೆ. ಶ್ರೀನಿವಾಸಗೌಡಹೇಳಿದರು.
ನಗರದಲ್ಲಿ ಭಾನುವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಶಾಖೆಯ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವ ಕೆಲಸಗಳು ಪ್ರಶಂಸನೀಯ ವಾದದ್ದು. ಮೂಢನಂಬಿಕೆಗಳು ಹಳ್ಳಿಗಳಲ್ಲಿ ದಟ್ಟವಾಗಿ ಬದುಕನ್ನು ಹಾಳು ಮಾಡುತ್ತಿವೆ. ಅಂಥವರಿಗೆ ವಿವೇಕವನ್ನು ಇಂತಹ ಸಂಸ್ಥೆಗಳು ಮಾಡಬೇಕಿದೆ ಎಂದರು.
ನಮ್ಮ ಜ್ಞಾನ ವಿಕಾಸವಾಗುತ್ತದೆ. ವಿಜ್ಞಾನದ ಶಕ್ತಿಯನ್ನು ಸದುಪಯೋಗಪಡಿಸಿ ಸಾಮಾಜಿಕ ಕ್ರಾಂತಿ ಮಾಡಬೇಕಿದೆ. ವಿಜ್ಞಾನ ಎಂಬ ಅರಿವನ್ನು ಉಂಟುಮಾಡಲು ಜಿಲ್ಲೆಯಾದ್ಯಂತ ಸದಸ್ಯತ್ವ ಆಂದೋಲನದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಸಾಮಾಜಿಕವಾಗಿಯೂ ಜ್ಞಾನ ಹೆಚ್ಚಾಗಬೇಕು. ಮೌಢ್ಯಗಳು ಕಡಿಮೆಯಾಗಿ ನಮ್ಮಲ್ಲಿರುವ ಜಾತೀಯತೆ, ಧರ್ಮಾಂಧತೆ ಎಲ್ಲವೂ ಮರೆಯಾಗಬೇಕು ಎಂದರು.
ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಮಾತನಾಡಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಶಾಖೆ ಸದಸ್ಯತ್ವ ಆಂದೋಲನ ನಡೆಸುತ್ತಿದ್ದು ಇದಕ್ಕೆ ಪ್ರಜ್ಞಾವಂತರು ಸದಸ್ಯರಾಗುವ ಮೂಲಕ ಬೆಳೆಸಬೇಕು. ವಿಜ್ಞಾನ ಬೆಳೆದಷ್ಟು ಸಮಾಜದ ಅಂಕು ಡೊಂಕುಗಳು ನಾಶವಾಗುತ್ತವೆ. ಮನುಷ್ಯನಲ್ಲಿ ವೈಜ್ಞಾನಿಕ ಬೆಳವಣಿಗೆ ಹೆಚ್ಚಾಗಿ ನಮ್ಮಲ್ಲಿರುವ ಮೌಢ್ಯ ಮತ್ತು ಕಂದಾಚಾರಗಳು ದೂರ ಆಗುತ್ತವೆ ಎಂದು ತಿಳಿಸಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಜಿ. ಶ್ರೀನಿವಾಸ್, ಅಧ್ಯಕ್ಷ ಕೆ.ಶ್ರೀನಿವಾಸ್, ಸಂಚಾಲಕ ಶರಣಪ್ಪ ಗಬ್ಬೂರ್, ಸದಸ್ಯರಾದ ನಿರಂಜನ್, ರಾಜೇಶ್, ಶ್ರೀನಿವಾಸಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.