ADVERTISEMENT

ಬಂಗಾರಪೇಟೆ | ಕೆಂದೋಳಮಂದೆ‌ ದೇವಸ್ಥಾನ ಜಮೀನು ಒತ್ತುವರಿ ಆರೋಪ

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ: ಸರ್ಕಾರಿ ಆಸ್ತಿ ರಕ್ಷಣೆಗೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:03 IST
Last Updated 13 ಸೆಪ್ಟೆಂಬರ್ 2025, 6:03 IST
ಬಂಗಾರಪೇಟೆ ತಾಲ್ಲೂಕಿನ ಕೆಂದೋಳಮಂದೆ ಗ್ರಾಮದ ಕೋಟೆ ಗೋಡೆ ಮತ್ತು ಆಂಜನೇಯಸ್ವಾಮಿ ದೇವಾಲಯದ ಜಮೀನನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸುತ್ತಿರುವುದು 
ಬಂಗಾರಪೇಟೆ ತಾಲ್ಲೂಕಿನ ಕೆಂದೋಳಮಂದೆ ಗ್ರಾಮದ ಕೋಟೆ ಗೋಡೆ ಮತ್ತು ಆಂಜನೇಯಸ್ವಾಮಿ ದೇವಾಲಯದ ಜಮೀನನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸುತ್ತಿರುವುದು    

ಬಂಗಾರಪೇಟೆ: ಕೆಂದೋಳಮಂದೆ ಗ್ರಾಮದ ಕೋಟೆ ಗೋಡೆ ಮತ್ತು ಆಂಜನೇಯಸ್ವಾಮಿ ದೇಗುಲ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡುತ್ತಿರುವ ಶೆಡ್ ತೆರವುಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಬೂದಿಕೋಟೆ ಹೋಬಳಿ, ದೊಡ್ಡಪೊನ್ನಾಂಡಹಳ್ಳಿ ಕಂದಾಯ ವೃತ್ತದ ವ್ಯಾಪ್ತಿಯಲ್ಲಿರುವ ವಸತಿ ರಹಿತ ಗ್ರಾಮ ಕೆಂದೋಲಮಂದೆ. ಈ ಗ್ರಾಮದ ಗ್ರಾಮಠಾಣಾ ‌ಸುತ್ತಲೂ ಇರುವಂತಹ ಹಳೆಯ ಕೋಟೆ ಗೋಡೆ ಮತ್ತು ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯಸ್ವಾಮಿ ದೇಗುಲ ಜಮೀನನ್ನು ಒತ್ತುವರಿ ಮಾಡಿಕೊಂಡು ಭೂಗಳ್ಳರು ಶೆಡ್ ನಿರ್ಮಿಸುತ್ತಿದ್ದಾರೆ. ಇದನ್ನು ತೆರವುಗೊಳಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಭೂಗಳ್ಳರು ಶೆಡ್ ನಿರ್ಮಿಸುತ್ತಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಭೂಗಳ್ಳರನ್ನು ತೆರವುಗೊಳಿಸಲು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗಾಗಿ ದೇವಾಲಯ ಹಾಗೂ ಗ್ರಾಮ ಠಾಣೆಗೆ ಸೇರಿರುವ ಭೂಮಿಯನ್ನು ಭೂಗಳ್ಳರಿಂದ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಕೆಂದೋಳಮಂದೆ ವಸತಿ ರಹಿತ ಗ್ರಾಮದ ಗ್ರಾಮಠಾಣೆ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಿ ಸೂಕ್ತ ಕ್ರಮ  ಕೈಗೊಳ್ಳುತ್ತೇನೆ

-ಸುಜಾತ ತಹಸೀಲ್ದಾರ್ ಬಂಗಾರಪೇಟೆ

ಕೆಂದೋಳಮಂದೆ ವಸತಿ‌ ರಹಿತ ಗ್ರಾಮವಾಗಿದ್ದು ಈ ಗ್ರಾಮಕ್ಕೆ ಸಂಬಂಧಪಟ್ಟ ಜಮೀನು ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಮೀನನ್ನು ರಕ್ಷಿಸಬೇಕು.

-ಹುಣಸನಹಳ್ಳಿ ಎನ್.ವೆಂಕಟೇಶ್ ರಾಜ್ಯಾಧ್ಯಕ್ಷ ದಲಿತ ರೈತ ಸೇನೆ

ಭೂಗಳ್ಳರಿಂದ ಜಮೀನು ಒತ್ತುವರಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡುತ್ತಿದೆ. ಹಾಗಾಗಿ ಭೂಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು

- ಸೂಲಿಕೂಂಟೆ ಆನಂದ್ ರಾಜ್ಯಾಧ್ಯಕ್ಷ ದಲಿತ ಸಮಾಜ ಸೇನೆ

ಭೂಗಳ್ಳರಿಂದ ಜಮೀನು ತೆರವುಗೊಳಿಸಿ ದೊಡ್ಡ ಪೊನ್ನಾಂಡಹಳ್ಳಿ ಗ್ರಾಮದ ವಸತಿ‌ ರಹಿತರಿಗೆ ಹಾಗೂ ಬಡವರಿಗೆ ನಿವೇಶನ ನೀಡಿ

- ನಾರಾಯಣಗೌಡ ರಾಜ್ಯ ಉಪಾಧ್ಯಕ್ಷ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.