ಕೆಜಿಎಫ್: ನಗರದ ಹೊರವಲಯದ ಬೈನೇಹಳ್ಳಿ ಹಾಳು ಬಾವಿಗೆ ಬಿದ್ದಿದ್ದ ಕೃಷ್ಣಮೃಗವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.
ಗ್ರಾಮದಲ್ಲಿದ್ದ ಸುಮಾರು ನೂರು ಅಡಿ ಆಳದ ಹಾಳು ಬಾವಿಗೆ ಕೃಷ್ಣಮೃಗ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಸುಮಾರು 120 ಕೆಜಿ ತೂಕವುಳ್ಳ ಗಂಡು ಕೃಷ್ಣಮೃಗವನ್ನು ಯಶಸ್ವಿಯಾಗಿ ಹಗ್ಗದ ಮೂಲಕ ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆ ಮುಗಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೃಗವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ರಾತ್ರಿ ಸಮೀಪದ ಜಮೀನಿಗೆ ಮೇವಿಗಾಗಿ ಬಂದಿದ್ದ ಕೃಷ್ಣಮೃಗ ದಾರಿ ತಪ್ಪಿ ಹಾಳು ಬಾವಿಗೆ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಎ.ಎಂ.ಸತೀಷ್ ಕುಮಾರ್, ವಿಜಯಕುಮಾರ್ ಆಲೂರ್, ಮುರಳಿ ಕೃಷ್ಣ, ಮಂಜುನಾಥ ನಿಡಗುಂಡಿ ಮತ್ತು ಅಭಿನಂದನ್ ಖಾನಾಪುರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.