ಕೋಲಾರ: ‘ಹೊಸಕೋಟೆ–ಕೋಲಾರ–ಮುಳಬಾಗಿಲು ಮೂಲಕ ರಾಜ್ಯದ ಗಡಿ ನಂಗಲಿವರೆಗಿನ ರಾಷ್ಟ್ರೀಯ ಹೆದ್ದಾರಿ–75ಅನ್ನು 4 ಪಥದಿಂದ 6 ಪಥಕ್ಕೆ ವಿಸ್ತರಿಸುವ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಜೊತೆಗೆ ಬೆಂಗಳೂರು–ಮೈಸೂರು ಹೆದ್ದಾರಿ ಮಾದರಿಯಲ್ಲಿ 4ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದು ಸಂಸದ ಎಸ್.ಮಲ್ಲೇಶ್ ಬಾಬು ತಿಳಿಸಿದರು.
ಸಂಸದರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆ ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘101 ಕಿ.ಮೀ ಉದ್ದದ ಹೆದ್ದಾರಿ ವಿಸ್ತರಣೆಗೆ ಕಾಮಗಾರಿಗೆ ಅಂದಾಜು ₹ 2,400 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದೆ. ಈ ಸಂಬಂಧ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತನಾಡಿದ್ದು, ಜನವರಿಯಲ್ಲಿ ಕೆಲಸ ಪ್ರಾರಂಭವಾಗಲಿದೆ’ ಎಂದರು.
‘ಅಪಘಾತ ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡ್ ಹಾಕಿಸುವ ಜತೆಗೆ ಕನಿಷ್ಠ 10 ರಿಂದ 15 ಕಿ.ಮೀಗೆ ಮಾತ್ರ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು.
‘ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಜೆಎಸ್ಆರ್ ಟೋಲ್ನವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಲ್ಯಾಂಕೋ ಅವರ ಅವಧಿ ಇನ್ನೂ 2 ವರ್ಷ ಇದೆ’ ಎಂದು ನುಡಿದರು.
‘ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ವೇ ಹೆದ್ದಾರಿಯಲ್ಲಿ ಈಚೆಗೆ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಹಂಪ್ಸ್ ಹಾಕಲು ಅವಕಾಶವಿಲ್ಲದ ಕಾರಣ ಬ್ಯಾರಿಕೇಡ್ ಇಡುವಂತೆ ಸೂಚಿಸಿದ್ದೇನೆ’ ಎಂದರು.
‘ಶ್ರೀನಿವಾಸಪುರ ರೈಲ್ವೆ ಕೋಚ್ ಕಾರ್ಖಾನೆ ಕಾಮಗಾರಿ ಸಂಬಂಧ ಪ್ರತಿವರ್ಷ ನವೀಕರಣ ಆಗುತ್ತಿದೆಯೇ ಹೊರತೂ ಯಾವುದೇ ಪ್ರಗತಿ ಆಗಿಲ್ಲ. ಆದರೆ, ಈಗ ರೈಲು ಬೋಗಿ ರಿಪೇರಿ ಘಟಕ ನಿರ್ಮಾಣ ಸಂಬಂಧ ಬಿಜಿಎಂಎಲ್ನವರು ಸಾವಿರ ಎಕರೆ ಜಾಗ ನೀಡಲು ಸಿದ್ಧವಿದ್ದು, ಮುಂದಿನ ದಿನಗಳಲ್ಲಿ ಈ ಕೆಲಸಕ್ಕೆ ಆದ್ಯತೆ ನೀಡುವುದು’ ಎಂದು ಹೇಳಿದರು.
ಕೆರೆ ಅಭಿವೃದ್ಧಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಆರ್ಆರ್ಆರ್ನಡಿ ಜಿಲ್ಲೆಯ 32 ಕೆರೆಗಳನ್ನು ₹ 68.40ಕೋಟಿ ಅನುದಾನದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
‘ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ನಾನು ಸಂಸತ್ತಿನಲ್ಲಿ ಎತ್ತಿದ ಒಂದು ಪ್ರಶ್ನೆ ಇಡೀ ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. 2016–17ರಲ್ಲಿ ಯೋಜನೆಯಡಿ ಮನೆಗಳು ಮಂಜೂರಾಗಿದ್ದವು. 2016ರಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿ ಈ ಕ್ರಮ ವಹಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಇದ್ದವರಿಗೆ ಅನುದಾನ ಬಿಡುಗಡೆ ಆಗಿತ್ತು. ಆದರೆ, ನನ್ನ ಪ್ರಶ್ನೆ ಪರಿಣಾಮ ಪುನರ್ ಸಮೀಕ್ಷೆ ನಡೆಸಲಾಗಿದೆ. ಅಲ್ಲದೇ, ಅನುದಾನ ಕೂಡ ಬಿಡುಗಡೆ ಮಾಡಿ ಮನೆಗಳು ಮಂಜೂರಾಗಿವೆ. ಕೋಲಾರಕ್ಕೂ ಅನುಕೂಲವಾಗಿದೆ’ ಎಂದು ವಿವರಿಸಿದರು.
ಜಿಲ್ಲೆಯ ಕೈಗಾರಿಕೆಗಳ ಸಿಎಸ್ಆರ್ ನಿಧಿ ಲಭಿಸಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು. ಬೀದಿ ದೀಪ, ಆ್ಯಂಬುಲೆನ್ಸ್, ಆರ್ಒ ಘಟಕ, ಉದ್ಯಾನಗಳಲ್ಲಿ ಜಿಮ್ ಅಳವಡಿಕೆ ಸೇರಿದಂತೆ ವಿವಿಧ ಉದ್ದೇಶಕ್ಕೆ ಬಳಸಲಾಗುವುದು. ಸಂಸದರ ನಿಧಿಯನ್ನು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದರು.
‘ಕೋಲಾರ ತಾಲ್ಲೂಕಿನ ಹೊಳಲಿ ಬಳಿಯ ಕೆಎಸ್ಸಿಎನಿಂದ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಕ್ರೀಡಾಂಗಣ ಬಳಿಯೇ ಖೇಲೋ ಇಂಡಿಯಾದಡಿ ಕ್ರೀಡಾಂಗಣ ನಿರ್ಮಿಸಲು 15 ಎಕರೆ ನೀಡಿ ಎಂದು ಮನವಿ ಮಾಡಲಾಗಿದೆ. ಜಿಲ್ಲಾಡಳಿತ ಈವರೆಗೆ ಸ್ಪಂದಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
’ಜಿಲ್ಲೆಯ ಕ್ಯಾಲನೂರಿನಲ್ಲಿ ಸಿಲ್ಕ್ ಪಾರ್ಕ್ ಮಾಡುವ ಯೋಜನೆ ಇದೆ. ಈಗಾಗಲೇ ಕೇಂದ್ರ ರೇಷ್ಮೆ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಸಭೆ ನಡೆಯಲಿದೆ’ ಎಂದರು.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು. ಅಪಘಾತಗಳೂ ಹೆಚ್ಚುತ್ತಿವೆ. ನಿತ್ಯ ಜನರು ಸಾಯುತ್ತಿದ್ದಾರೆ. ಅಪಘಾತ ತಡೆಯಲು ಸುಗಮ ಸಂಚಾರಕ್ಕೆ ಹೆದ್ದಾರಿ ವಿಸ್ತರಿಸಲಾಗುತ್ತಿದೆ– ಎಂ.ಮಲ್ಲೇಶ್ ಬಾಬು, ಸಂಸದ
ಕೃಷ್ಣ ನದಿ ನೀರು ಸಿಗುವ ವಿಶ್ವಾಸ
‘ಕೃಷ್ಣಾ ನದಿ ನೀರನ್ನು ಕೋಲಾರ–ಚಿಕ್ಕಬಳ್ಳಾಪುರಕ್ಕೆ ತರುವ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಜೊತೆ ಒಮ್ಮೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ಮಳೆಬಿದ್ದಾಗ ಆಲಮಟ್ಟಿ ಜಲಾಶಯ ತುಂಬಿ ಹರಿಯುವ ನೀರನ್ನು (15 ಟಿಎಂಸಿ) ಮದನಪಲ್ಲಿಯಿಂದ ಪಂಪ್ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದೇವೆ. ಆ ಭಾಗದ ಶಾಸಕರೊಂದಿಗೆ ಚರ್ಚೆ ಮಾಡಿ ಡಿಪಿಆರ್ ಸಿದ್ಧಪಡಿಸಿ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರ ಸಹಕಾರ ಪಡೆಯಲಾಗುವುದು. ಮತ್ತೆ ಚಂದ್ರಬಾಬು ನಾಯ್ಡು ಭೇಟಿ ಮಾಡುತ್ತೇವೆ’ ಎಂದು ಮಲ್ಲೇಶ್ ಬಾಬು ಹೇಳಿದರು.
ರೈಲ್ವೆ ಸೇತುವೆ ನಿರ್ಮಾಣಕ್ಕೆ ಒತ್ತು
‘ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾಮಸಮುದ್ರ (₹ 28 ಕೋಟಿ ವೆಚ್ಚ) ದೇಶಿಹಳ್ಳಿ (₹ 27.19 ಕೋಟಿ) ಎಸ್.ಎನ್.ರೆಸಾರ್ಟ್ ಸಮೀಪ (₹ 38.37) ಸ್ಯಾನಿಟೋರಿಯಂ ಕೋಲಾರ-ಟೇಕಲ್ ರಸ್ತೆ ಹಾಗೂ ಟೇಕಲ್ ರೈಲ್ವೆ ಮೇಲ್ಸೇತುವೆ (ಆರ್ಒಬಿ) ನಿರ್ಮಿಸಲಾಗುವುದು. ಮರಳಹಳ್ಳಿಯಲ್ಲಿ ₹ 4.3 ಕೋಟಿ ವೆಚ್ಚದಲ್ಲಿ ಆರ್ಯುಬಿ ಕೆಲಸ ನಡೆಯುತ್ತಿದೆ. ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ರಸ್ತೆ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿವೆ’ ಎಂದು ಮಲ್ಲೇಶ್ ಬಾಬು ಹೇಳಿದರು. ‘ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ವರ್ತುಲ ರೈಲ್ವೆ ಯೋಜನೆಯಲ್ಲಿ (ರಿಂಗ್ ರೈಲು) ಮಾಲೂರಿನ ಚಿಕ್ಕತಿರುಪತಿ ಬಳಿ ರೈಲು ನಿಲುಗಡೆಗೆ ಮನವಿ ಮಾಡಲಾಗಿದೆ’ ಎಂದರು.
ಕೌಶಲ ಕೇಂದ್ರ ನಿರ್ಮಾಣ
ಕೌಶಲ ಕೇಂದ್ರ ನಿರ್ಮಾಣಕ್ಕೆ ನರಸಾಪುರದಲ್ಲಿ ಒಂದು ಎಕರೆ ಜಾಗ ಸಿಕ್ಕಿದೆ. ಕಟ್ಟಡ ನಿರ್ಮಿಸಲು ಕೋರಲಾಗಿದೆ. ಸರ್ಕಾರಿ ಐಟಿಐ ಡಿಪ್ಲೊಮಾ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗ ತರಬೇತಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ವಾರ ಸ್ವಂತ ಹಣದಲ್ಲಿ 60 ಮಂದಿಗೆ ಒಂದು ವಾರ ಉಚಿತ ತರಬೇತಿ ಕೊಡಲಾಗುವುದು ಎಂದು ಮಲ್ಲೇಶ್ ಬಾಬು ಹೇಳಿದರು. ನರಸಾಪುರ-ವೇಮಗಲ್ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿದ ಕೆಲವೇ ತಿಂಗಳಲ್ಲೇ ಅನೇಕರು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇದಕ್ಕೆ ಪ್ರಮುಖವಾಗಿ ಕೌಶಲ ಇಲ್ಲದಿರುವುದೇ ಕಾರಣ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.