
ಕೋಲಾರ: ಗ್ರಾಹಕರೊಬ್ಬರು ತಮ್ಮ ಪುತ್ರಿಯ ವೈದ್ಯಕೀಯ ಶಿಕ್ಷಣ ಶುಲ್ಕ ಪಾವತಿಸಲು ಬ್ಯಾಂಕ್ ಮೂಲಕ ವರ್ಗಾಯಿಸಿದ ಹಣ ತಪ್ಪಾಗಿ ಬೇರೆ ವ್ಯಕ್ತಿಯ ಖಾತೆಗೆ ಜಮೆಯಾಗಿರುವುದಕ್ಕೆ ಬ್ಯಾಂಕ್ ನಿರ್ಲಕ್ಷ್ಯವೇ ಕಾರಣ ಎಂದಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಗ್ರಾಹಕನಿಗೆ ಮರುಪಾವತಿಸಲು ಆದೇಶಿಸಿದೆ.
ದೂರಿನ ವಿಚಾರಣೆ ನಡೆಸಿದ ಆಯೋಗವು, ಬ್ಯಾಂಕ್ಗಳು ಕೇವಲ ಖಾತೆ ಸಂಖ್ಯೆಯ ಆಧಾರದ ಮೇಲೆ ಹಣ ವರ್ಗಾವಣೆ ಮಾಡುವಂತಿಲ್ಲ. ಅಭ್ಯರ್ಥಿಯ ಹೆಸರು ಹಾಗೂ ಐಎಫ್ಎಸ್ಸಿ ಕೋಡ್ ಪರಿಶೀಲಿಸುವ ಜವಾಬ್ದಾರಿ ಹೊಂದಿವೆ ಎಂದು ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ದೂರುದಾರ ಕೋಲಾರ ನಗರದ ಪೇಟೆಚಾಮನಹಳ್ಳಿಯ ಎಸ್.ಜಿ.ಲೇಔಟ್ನ ನಿವಾಸಿ ಎನ್.ಶ್ರೀನಿವಾಸರೆಡ್ಡಿ ಪುತ್ರಿ ಡಾ.ತೃಪ್ತಿ ಎನ್.ಎಸ್., ತುಮಕೂರಿನ ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದ್ವಿತೀಯ ವರ್ಷದ ಎಂ.ಡಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಅವರ ಕಾಲೇಜು ಶುಲ್ಕ ಪಾವತಿಗಾಗಿ ಶ್ರೀನಿವಾಸರೆಡ್ಡಿ, 2023ರ ಡಿ.13 ರಂದು ನೆಫ್ಟ್ ಮೂಲಕ ₹ 13,75,228 ಮೊತ್ತವನ್ನು ಎಸ್ಬಿಐ ಬ್ಯಾಂಕ್ ಮೂಲಕ ಕೆನರಾ ಬ್ಯಾಂಕ್ಗೆ ವರ್ಗಾಯಿಸಿದ್ದರು.
ಆದರೆ, ಕಾಲೇಜಿನ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಪರಿಣಾಮ ಹಣವು ಮಹಾರಾಷ್ಟ್ರದ ಕಮಲ್ ಟೆಕ್ಸ್ಟೈಲ್ನ ಕೆನರಾ ಬ್ಯಾಂಕ್ ಖಾತೆಗೆ ವರ್ಗಾವಣೆಯಾಯಿತು. ಶ್ರೀನಿವಾಸರೆಡ್ಡಿ, ಚಲನ್ನಲ್ಲಿ ಕಾಲೇಜಿನ ಹೆಸರನ್ನು ಹಾಗೂ ಐಎಫ್ಎಸ್ಸಿ ಕೋಡ್ ಸರಿಯಾಗಿ ನಮೂದಿಸಿದ್ದರೂ, ಬ್ಯಾಂಕ್ ಅಧಿಕಾರಿಗಳು ಅವುಗಳನ್ನು ಪರಿಶೀಲಿಸದೆ ಹಣ ವರ್ಗಾಯಿಸಿರುವುದು ಈ ಪ್ರಕರಣದಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.
ತಪ್ಪು ವರ್ಗಾವಣೆಯ ವಿಷಯ ತಿಳಿದ ತಕ್ಷಣ ದೂರುದಾರ, ಬ್ಯಾಂಕ್ ಅಧಿಕಾರಿ ಸಂಪರ್ಕಿಸಿ ಹಣ ವಾಪಸ್ ಮಾಡುವಂತೆ ಮನವಿ ಸಲ್ಲಿಸಿದರು. ಕಾನೂನು ಪ್ರಕಾರವಾಗಿ ಲೀಗಲ್ ನೋಟಿಸ್ ನೀಡಿದ್ದು, ಪ್ರಯೋಜನವಾಗದೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಲಾಯಿತು. ಆದರೆ, ಕ್ರಮವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಶ್ರೀನಿವಾಸರೆಡ್ಡಿ, 2024ರ ಆ.3ರಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಬ್ಯಾಂಕ್ ಪರ ವಕೀಲರು, ಗ್ರಾಹಕರೇ ತಪ್ಪು ಖಾತೆ ಸಂಖ್ಯೆ ನೀಡಿದ್ದಾರೆ ಎಂಬ ವಾದ ಮಂಡಿಸಿದ್ದರು. ಆದರೆ, ಆಯೋಗ ಈ ವಾದವನ್ನು ತಳ್ಳಿ ಹಾಕಿ, ಖಾತೆದಾರರ ಹೆಸರು ಮತ್ತು ಐಎಫ್ಎಸ್ಸಿ ಕೋಡ್ ಸರಿಯಾಗಿದ್ದಾಗ, ಬ್ಯಾಂಕ್ ಅಧಿಕಾರಿಗಳು ಅವುಗಳನ್ನು ಪರಿಶೀಲಿಸದೆ ಹಣ ವರ್ಗಾಯಿಸಿರುವುದು ಸೇವಾ ದೋಷ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. 30 ದಿನಗಳೊಳಗೆ ಹಣ ಪಾವತಿಸಲು ಆಯೋಗದ ಅಧ್ಯಕ್ಷ ವೈ.ಎಸ್.ತಮ್ಮಣ್ಣ, ಸದಸ್ಯ ಕೆ.ಎಸ್.ರಾಜು ಜ.28ರ ಆದೇಶದಲ್ಲಿ ತಿಳಿಸಿದ್ದಾರೆ. ದೂರುದಾರರ ಪರವಾಗಿ ವಕೀಲ ಎಸ್.ಡಿ.ಚೌಡೇಗೌಡ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.