ಕೋಲಾರ: ‘ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದು ಜನಪರವಾಗಿ ಕೆಲಸ ಮಾಡುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಹಾಗೂ ತಾಲ್ಲೂಕಿನ ವೇಮಗಲ್ ಎಸ್ಎಫ್ಸಿಎಸ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳಿಗೆ ₹ 3.56 ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಕಥೆ ಮುಗಿಯಿತು ಎಂದೇ ಭಾವಿಸಿದ್ದೆವು. ಆದರೆ, ಬ್ಯಾಂಕ್ ಜನರ ಆಲೋಚನೆ ಮೀರಿ ಬೆಳೆದು ನೂರಾರು ಕೋಟಿ ಸಾಲ ನೀಡುವ ಶಕ್ತಿ ಪಡೆದಿದೆ’ ಎಂದರು.
‘ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯ ರೈತರು, ಮಹಿಳೆಯರ ಸ್ವಾವಲಂಬನೆಗೆ ನೆರವಾಗುವ ಶಕ್ತಿ ಪಡೆದುಕೊಂಡಿದೆ. ಅವಳಿ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಸಾಲ ನೀಡಲು ಬ್ಯಾಂಕ್ ಸಶಕ್ತವಾಗಿದೆ. ಸಮರ್ಪಕವಾಗಿ ಸಾಲ ವಸೂಲಿ ಮಾಡುವ ಮೂಲಕ ಬ್ಯಾಂಕ್ ದೇಶಕ್ಕೆ ಮಾದರಿಯಾಗಲಿ’ ಎಂದು ಆಶಿಸಿದರು.
‘ವೇಮಗಲ್ನಲ್ಲಿ ಬ್ಯಾಂಕ್ನ ಶಾಖೆ ಆರಂಭಿಸುವ ಚಿಂತನೆಯಿದೆ. ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್ನಲ್ಲೇ ಹಣ ಠೇವಣಿಯಿಟ್ಟು ಮತ್ತಷ್ಟು ರೈತರು ಮತ್ತು ಮಹಿಳೆಯರಿಗೆ ಸಾಲ ನೀಡಲು ಸಹಕರಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.
‘ಕೊರೊನಾ ಸೋಂಕಿನ ಕಾರಣಕ್ಕೆ ಸಾಲ ವಿತರಣೆ ತಡವಾಗಿದೆ. ಕಡಗಟ್ಟೂರಿನಲ್ಲಿ ಮಹಿಳೆಯರಿಗೆ ₹ 2 ಕೋಟಿ ಸಾಲ ನೀಡಲಾಗಿದೆ. ವೇಮಗಲ್ ಭಾಗದಲ್ಲಿ ಹೆಚ್ಚಿನ ಮಹಿಳಾ ಸಂಘಗಳಿಗೆ ಸಾಲ ನೀಡುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್ಕುಮಾರ್, ಕೆ.ವಿ.ದಯಾನಂದ್, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ನಿರ್ದೇಶಕ ಚಂದ್ರೇಗೌಡ, ಪಿಎಲ್ಡಿ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ರಮೇಶ್, ವೇಮಗಲ್ ಎಸ್ಎಫ್ಸಿಎಸ್ ಅಧ್ಯಕ್ಷ ನಾಗೇಶ್, ನಿರ್ದೇಶಕರಾದ ಬೈರಾರೆಡ್ಡಿ, ವೀರಭದ್ರಪ್ಪ, ಓಬಣ್ಣ, ವೆಂಕಟರಾಮ್, ಶೈಲಜಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.