ಕೋಲಾರ: ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಅಧಿಕಾರಿಗಳಿಗೆ ಮತ್ತು ಸಂಘಟನೆಗಳ ಮುಖಂಡರಿಗೆ ಸೂಚಿಸಿದರು.
ನ.1ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಬಂಧ ಸೋಮವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ನಗರದ ಗಾಂಧಿವನದಲ್ಲಿ ಮೊದಲು ಧ್ವಜಾರೋಹಣ ಮಾಡಿ ಸ್ತಬ್ಧಚಿತ್ರಗಳ ಮೆರವಣಿಗೆ ಚಾಲನೆ ನೀಡಲಾಗುವುದು. ನಂತರ ಗಾಂಧಿವನದ ಮುಂಭಾಗದಲ್ಲಿಯೇ ವೇದಿಕೆ ಕಾರ್ಯಕ್ರಮವನ್ನು ಮಾಡಲಾಗುವುದು. ಅದೇ ದಿನ ಸಂಜೆ ಶಿಕ್ಷಣ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗುವುದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಗೌಡ ಮಾತನಾಡಿ, ‘ಇಡೀ ನವೆಂಬರ್ ತಿಂಗಳು ಪೂರ್ತಿ ಕನ್ನಡ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಅದನ್ನು ವರ್ಷ ಪೂರ್ತಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಕನ್ನಡಪರ ಕೆಲಸ, ಹೋರಾಟ ಮಾಡಿರುವ ವ್ಯಕ್ತಿಗಳನ್ನು ಪರಿಗಣಿಸಬೇಕು. ಬೇರೆ ಭಾಷಿಕ ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾರೆ. ಅದನ್ನು ನಿಲ್ಲಿಸಿ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.
ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ, ‘ಪ್ರತಿ ವರ್ಷವೂ ಕೋಲಾರ ಜಿಲ್ಲೆಯಲ್ಲಿ ಆಚರಣೆ ಮಾಡುವ ರಾಜ್ಯೋತ್ಸವ ಆಚರಣೆಯು ಮಿನಿ ದಸರಾ ಎಂದೇ ಖ್ಯಾತಿ ಪಡೆದಿದೆ. ಈ ವರ್ಷವೂ ಅರಣ್ಯ ಇಲಾಖೆಯ ಸಹಕಾರದಿಂದ ಆನೆಯ ಮೇಲೆ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮಾಡಲಾಗುವುದು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ನಗರಸಭೆ ಆಯುಕ್ತ ನವೀನ್ ಚಂದ್ರ, ಕನ್ನಡಪರ ಸಂಘಟನೆಗಳ ಮುಖಂಡರಾದ ಕಲಾವಿದ ವಿಷ್ಣು, ಕೊ.ನ.ಪ್ರಭಾಕರ್, ಆ.ಕೃ.ಸೋಮಶೇಖರ್, ಸೋಮಣ್ಣ, ಅಬ್ಬಣಿ ಶಿವಣ್ಣ, ಸುರೇಶ್ ಕುಮಾರ್, ರಾಘವೇಂದ್ರ, ರಾಜಪ್ಪ, ಬ.ಹಾ.ಶೇಖರಪ್ಪ, ಕೃಷ್ಣೇಗೌಡ ಇದ್ದರು.
ಒಳಾಂಗಣಕ್ಕೆ ಡಾ.ರಾಜ್ ಹೆಸರಿಡಿ
ಕೋಲಾರ ನಗರದ ಒಳಾಂಗಣ ಕ್ರೀಡಾಂಗಣಕ್ಕೆ ವರನಟ ಡಾ.ರಾಜ್ ಕುಮಾರ್ ಹೆಸರಿಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ ಆಗ್ರಹಿಸಿದರು. ಕೋಲಾರಮ್ಮ ದೇವಾಲಯಕ್ಕೆ ತೆರಳು ದಾರಿಯ ಆರಂಭದಲ್ಲಿ ನಿರ್ಮಾಣವಾಗುತ್ತಿರುವ ಮಹಾದ್ವಾರಕ್ಕೆ ಜಿಲ್ಲಾಧಿಕಾರಿಯು ಆಸಕ್ತಿಯಿಂದ ‘ಗಂಗರ ಮಹಾದ್ವಾರ’ ಎಂದು ನಾಮಕರಣ ಮಾಡಬೇಕು. ಕೋಲಾರ ನೂತನ ಬಸ್ ನಿಲ್ದಾಣದ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು. ಕುವೆಂಪು ಉದ್ಯಾನದಲ್ಲಿರುವ ಕುವೆಂಪು ಪ್ರತಿಮೆ ನವೀಕರಣ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.