ADVERTISEMENT

ಕೋಲಾರ: ಅರ್ಧಕ್ಕೆ ನಿಂತ ಯಾತ್ರಿಕರ ಭವನ

ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:10 IST
Last Updated 3 ಜನವರಿ 2026, 7:10 IST
ಬಂಗಾರಪೇಟೆ ತಾಲ್ಲೂಕಿನ ದೊಡ್ಡರು ಕರಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಟರಾಯಸ್ವಾಮಿ ದೇವಾಲಯದ ಬಳಿ ಅರ್ಧಕ್ಕೆ ಸ್ಥಗಿತಗೊಂಡಿರುವ ಯಾತ್ರಿಕರ ಭವನ ಕಾಮಗಾರಿ 
ಬಂಗಾರಪೇಟೆ ತಾಲ್ಲೂಕಿನ ದೊಡ್ಡರು ಕರಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಟರಾಯಸ್ವಾಮಿ ದೇವಾಲಯದ ಬಳಿ ಅರ್ಧಕ್ಕೆ ಸ್ಥಗಿತಗೊಂಡಿರುವ ಯಾತ್ರಿಕರ ಭವನ ಕಾಮಗಾರಿ    

ಬಂಗಾರಪೇಟೆ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯದ ಯಾತ್ರಿಕ ಭವನ ಕಾಮಗಾರಿಯು ಅರ್ಥಕ್ಕೆ ನಿಂತಿದ್ದು, ಕಟ್ಟಡ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ದೂರದ ಊರುಗಳಿಂದ ಬ್ಯಾಟರಾಯಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿದ್ದ ಯಾತ್ರಿಕರ ಭವನವು ಕಳೆದ ಮೂರು ವರ್ಷಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರವು ಲಕ್ಷಾಂತರ ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲಾಯಿತು. ಭರದಿಂದ ಸಾಗಿದ ಕಟ್ಟಡ ನಿರ್ಮಾಣ ಕಾರ್ಯವು ಚಾವಣಿ ಮುಕ್ತಾಯದ ಹಂತಕ್ಕೆ ಬಂದು ಸ್ಥಗಿತಗೊಂಡಿದೆ. ಹಾಗಾಗಿ ಈ ಕಟ್ಟಡವು ಸದ್ಯ ಅನೈತಿಕ ಚಟುವಟಿಕೆ ಹಾಗೂ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಹಾಗಾಗಿ ರಾತ್ರಿ ವೇಳೆ ಆ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ADVERTISEMENT

ಕಾಮಗಾರಿ ನಿಲ್ಲಲು ಗುತ್ತಿಗೆದಾರರ ನಿರ್ಲಕ್ಷ್ಯವೋ ಅಥವಾ ಅನುದಾನದ ಕೊರತೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸಾರ್ವಜನಿಕರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಯಾತ್ರಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ನಾವು ಪ್ರತಿ ವರ್ಷ ಇಲ್ಲಿಗೆ ಬರುತ್ತೇವೆ. ಖಾಸಗಿ ಹೋಟೆಲ್‌ಗಳಲ್ಲಿ ಉಳಿಯಲು ಹೆಚ್ಚಿನ ಹಣ ಕೇಳುತ್ತಾರೆ. ಯಾತ್ರಿಕರ ಭವನ ನಿರ್ಮಾಣವಾದರೆ ನಮಗೆ ತುಂಬಾ ಅನುಕೂಲವಾಗುತ್ತಿತ್ತು. ಆದರೆ, ಮೂರು ವರ್ಷ ಕಳೆದರೂ ಕಟ್ಟಡದ ಕೆಲಸ ಮಾತ್ರ ಮುಗಿಯುತ್ತಿಲ್ಲ ಎಂದು ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಯಾತ್ರಿಕರ ಭವನ ಕಟ್ಟಡದಲ್ಲಿ ಪ್ಲಾಸ್ಟಿಕ್ ಲೋಟ ಮದ್ಯದ ಬಾಟಲಿಗಳು  
ಯಾತ್ರಿಕರ ಭವನವು ಕಳೆದ ಮೂರು ವರ್ಷಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಕುರಿತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.
– ಶ್ರೀನಿವಾಸ್ ರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ಧಾರ್ಮಿಕ ದತ್ತಿ ಇಲಾಖೆ ಬಂಗಾರಪೇಟೆ 
ಜನ ಸಾಮಾನ್ಯರ ತೆರಿಗೆ ಹಣ ಈ ರೀತಿ ವ್ಯರ್ಥವಾಗುತ್ತಿರುವುದು ವಿಷಾದನೀಯ. ಸರಿಯಾದ ಉಸ್ತುವಾರಿ ಇಲ್ಲದ ಕಾರಣ ಅರ್ಧ ನಿರ್ಮಾಣವಾಗಿರುವ ಕಟ್ಟಡ ಕುಸಿಯುವ ಹಂತ ತಲುಪಿದೆ.
– ಮಂಜುನಾಥ ಎನ್, ಸ್ಥಳೀಯರು ಬ್ಯಾಟರಾಯಸ್ವಾಮಿ ಬೆಟ್ಟ 
ಜನವಸತಿ ಇಲ್ಲದೆ ಪಾಳು ಬಿದ್ದಿರುವ ಈ ಜಾಗವು ಈಗ ಕುಡುಕರ ಮತ್ತು ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಇದು ಸುತ್ತಮುತ್ತಲಿನ ನಿವಾಸಿಗಳಿಗೆ ಭೀತಿ ಮೂಡಿಸಿದೆ.
– ರಾಜೇಂದ್ರ, ಸಮಾಜ ಸೇವಕ ನೆರಳೆಕೆರೆ
ಯಾತ್ರಿಕರ ಅನುಕೂಲಕ್ಕಾಗಿ ಶಾಸಕರು ಆಸಕ್ತಿ ವಹಿಸಿ ಯಾತ್ರಿಕರ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಅರ್ಧಕ್ಕೆ ನಿಂತು ಹಳ್ಳ ಹಿಡಿದಿದೆ.
– ರವೀಂದ್ರ ಕುಮಾರ್, ದೂಡ್ಡೂರು ಕರಪನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.