ADVERTISEMENT

ರಾಜಕಾರಣ ಚುನಾವಣೆಗೆ ಸೀಮಿತ: ಶಾಸಕ

ರಸ್ತೆಗಳ ಅಭಿವೃದ್ಧಿಗೆ ₹ 170 ಕೋಟಿ, ವಿರೋಧ ಪಕ್ಷದವರು ಚರ್ಚೆಗೆ ಬರಲಿ: ಎಂಎಲ್‌ಸಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:29 IST
Last Updated 13 ನವೆಂಬರ್ 2025, 6:29 IST
ಕೋಲಾರ ತಾಲ್ಲೂಕಿನ ಮದ್ದೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಚಾಲನೆ ನೀಡಿದರು
ಕೋಲಾರ ತಾಲ್ಲೂಕಿನ ಮದ್ದೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಚಾಲನೆ ನೀಡಿದರು   

ಕೋಲಾರ: ಅಭಿವೃದ್ಧಿ ಯೋಜನೆಗಳ ಜಾರಿಗೆ ಗ್ರಾಮಗಳ ಜನರ ಸಹಕಾರ ಅಗತ್ಯ. ಅದನ್ನು ಬಿಟ್ಟು ವಿನಾಕಾರಣ ರಾಜಕಾರಣ ಮಾಡಬಾರದು. ರಾಜಕಾರಣ ಕೇವಲ ಚುನಾವಣೆಗೆ ಸೀಮಿತವಾಗಿರಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮದಲ್ಲಿ ಬುಧವಾರ 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯ ಮೊದಲ ಮಹಡಿ ಕಟ್ಟಡ ಉದ್ಘಾಟನೆ ಹಾಗೂ ₹ 50 ಲಕ್ಷ ವೆಚ್ಚದ ಸಿಸಿ ರಸ್ತೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಜನತೆಗೆ ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ಜಿಲ್ಲೆಯಲ್ಲೇ ಅತಿ ಹೆಚ್ಚು ಅನುದಾನ ಕೋಲಾರ ತಾಲ್ಲೂಕಿಗೆ ಸಿಕ್ಕಿದೆ. ಅಭಿವೃದ್ಧಿ ಮಾಡಲು ಮನೆ ಬಾಗಿಲಿಗೆ ಬಂದು ಕೆಲಸ ಮಾಡಲು ಸಿದ್ಧ. ಕೆಲಸ ಮಾಡಬೇಕು ಎನ್ನುವ ಇಚ್ಛಾಶಕ್ತಿ ಮುಖ್ಯವಾಗುತ್ತದೆ ಎಂದರು.

ADVERTISEMENT

ವೇಮಗಲ್ ಭಾಗದಲ್ಲಿ ಸಿ.ಬೈರೇಗೌಡರನ್ನು ಎಲ್ಲರೂ ನೆನೆಯುತ್ತಾರೆ. ಆದರೆ, ಕೆಲವಡೆ ಏನಾದರೂ ಕೆಲಸ ಮಾಡಲು ಹೋದರೆ ಅಧಿಕಾರಿಗಳಿಗೆ ಜನರು ಧಮ್ಕಿ ಹಾಕುತ್ತಾರೆ. ಯಾರು ಏನೇ ಮಾಡಿದರೂ ಗ್ರಾಮಗಳ ಅಭಿವೃದ್ಧಿಯೇ ಮುಖ್ಯ ಗುರಿಯಾಗಿದೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ ಬಗೆಹರಿಸುತ್ತೇವೆ. ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ರೈತರಿಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯಿತಿಯು ಒಂದು ಸರ್ಕಾರದ ರೀತಿ ಕೆಲಸ ಮಾಡುತ್ತದೆ. ಮೊದಲು ಗ್ರಾ.ಪಂಗೆ ಮೂಲಸೌಲಭ್ಯಗಳು ಇರಬೇಕು. ಎಲ್ಲಾ‌ಕಡೆ ಗ್ರಾಮ ಪಂಚಾಯತಿ ಕಟ್ಟಡಗಳು ಅಭಿವೃದ್ಧಿ ಹೊಂದುತ್ತಿವೆ ಎಂದರು.

ಸಿ.ಬೈರೇಗೌಡರ ಕಾಲದಲ್ಲಿ‌ ಅಭಿವೃದ್ಧಿ ಆಗಿದ್ದ ಎಲ್ಲಾ ರಸ್ತೆಗಳು ಈವರೆಗೆ ಹಾಗೆಯೇ ಇದ್ದು, ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರ ಸುಮಾರು ₹ 170 ಕೋಟಿಯನ್ನು ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ವಿರೋಧ ಪಕ್ಷದವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು


ಮದ್ದೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು, ಉಪಾಧ್ಯಕ್ಷೆ ಪ್ರೇಮಮ್ಮ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ತಾ.ಪಂ ಇಒ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ವೆಂಕಟರಾಮ್, ಶ್ರೀನಿವಾಸಗೌಡ, ಕನಕಣ್ಣ, ಸತೀಶ್, ವೀರೇಂದ್ರ ಪಾಟೀಲ್, ಜಗನ್, ಪಿಡಿಒ ರೇವಣ್ಣ, ಗ್ರಾ.ಪಂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.