ಕೋಲಾರ: ನಗರ ಹೊರವಲಯದಲ್ಲಿರುವ ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶನಿವಾರ ರಾತ್ರಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೈವಾಕ್ ಕುಸಿದು ಬಿದ್ದಿದೆ. ಇದರಿಂದಾಗಿ ಸುಮಾರು 3 ಕಿ.ಮೀ ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಭಾನುವಾರ ಬೆಳಿಗ್ಗೆಯೂ ದಟ್ಟಣೆ ಕಂಡುಬಂತು.
ಬೆಂಗಳೂರಿನಿಂದ ಅಕ್ಕಿಚೀಲ ತುಂಬಿಕೊಂಡು ಬರುತ್ತಿದ್ದ ಟ್ರಕ್, ಕೊಂಡರಾಜನಹಳ್ಳಿ ಆಂಜನೇಯ ದೇಗುಲ ಬಳಿ ರಾತ್ರಿ 11 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದ್ದು, ಆ ರಭಸಕ್ಕೆ ಸ್ಕೈವಾಕ್ ಮಧ್ಯಕ್ಕೆ ತುಂಡಾಗಿದೆ.
ಸ್ಕೈವಾಕ್ನ ಅರ್ಧ ಭಾಗ ಲಾರಿಯ ಮೇಲೆ ಬಿದ್ದಿದ್ದು, ಮತ್ತೊಂದು ಭಾಗವು ಪಕ್ಕದ ರಸ್ತೆಯಲ್ಲಿ ಬಿದ್ದಿದೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಎರಡು ಲಾರಿ ಹಾಗೂ ಒಂದು ಕಾರು ಜಖಂಗೊಂಡಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. ಗಾಬರಿಗೊಂಡ ಸ್ಥಳೀಯರು ಟ್ರಕ್ನಿಂದ ಚಾಲಕನನ್ನು ಕೆಳಗಿಳಿಸಿ ಥಳಿಸಲು ಮುಂದಾದರು. ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದಾಗ ವಾಹನವು ನಿಯಂತ್ರಣ ತಪ್ಪಿ ಸ್ಕೈವಾಕ್ಗೆ ಗುದ್ದಿತು ಎಂದು ಚಾಲಕನು ಹಿಂದಿಯಲ್ಲಿ ಹೇಳುತ್ತಿದ್ದದ್ದು ಕಂಡುಬಂತು. ಬಳಿಕ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
ಸಂಚಾರ ದಟ್ಟಣೆ ಉಂಟಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಕ್ರೇನ್ಗಳನ್ನು ಬಳಸಿ ನಾಲ್ಕೈದು ಗಂಟೆ ತೆರವು ಕಾರ್ಯಾಚರಣೆ ನಡೆಸಿದರು. ಮುರಿದು ಬಿದ್ದಿದ್ದ ಸ್ಕೈವಾಕ್ಗಳನ್ನು ರಸ್ತೆ ಪಕ್ಕದಲ್ಲಿ ಇರಿಸಿದರು. ತಮಿಳುನಾಡು ಹಾಗೂ ಆಂಧ್ರ ಪ್ರದೇಶ, ಇತ್ತ ಬೆಂಗಳೂರು ಕಡೆಗೆ ತೆರಳುವ ಪ್ರಯಾಣಿಕರು, ವಾಹನ ಚಾಲಕರು ಸಂಚಾರ ದಟ್ಟಣೆಗೆ ಸಿಲುಕಿ ಸುಮಾರು ಎರಡು ಗಂಟೆ ಪರದಾಡಿದರು.
ಡಿಕ್ಕಿ ಹೊಡೆದ ಟ್ರಕ್ನಲ್ಲಿ ಅಕ್ಕಿ ಚೀಲಗಳು ಇದ್ದು, ವಾಹನವು ಸಂಪೂರ್ಣ ಹಾಳಾಗಿದೆ. ಈ ಕಾರಣ ತೆರವು ಮಾಡಲು ಸಾಧ್ಯವಾಗಲಿಲ್ಲ. ಅಕ್ಕಿಯನ್ನು ಬೇರೆ ವಾಹನಕ್ಕೆ ಸಾಗಿಸಿದ ಬಳಿಕ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕೊಂಡರಾಜನಹಳ್ಳಿ ಆಂಜನೇಯ ದೇಗುಲ ಬಳಿ ಇರುವ ಸ್ಕೈವಾಕ್ ಟ್ರಕ್ ಮೇಲೆಯೇ ಬಿದ್ದ ಕಬ್ಬಿಣದ ತುಂಡುಗಳು ಪೊಲೀಸರಿಂದ ಕ್ರೈನ್ ಬಳಸಿ ತೆರವು ಕಾರ್ಯಾಚರಣೆ
ಬಳಕೆಗೆ ಬಾರದ ಸ್ಕೈವಾಕ್!
ಈ ಸ್ಕೈವಾಕ್ ನಿರ್ಮಾಣ ಕೂಡ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿರ್ಮಾಣ ಮಾಡಿದಾಗಲೂ ಅಪಸ್ವರ ಎತ್ತಿದ್ದರು. ಕೊಂಡರಾಜನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ದಾಟಲು ಜನರು ಈ ಸ್ಕೈವಾಕ್ ಬಳಸಿದ್ದೇ ಅಪರೂಪ. ಈ ಸ್ಕೈವಾಕ್ ಇರುವ ಜಾಗದಿಂದ ಸ್ವಲ್ಪ ಮುಂದೆಯೇ ಡಿವೈಡರ್ ತೆರೆದಿದ್ದು ವಾಹನಗಳು ರಸ್ತೆ ಬದಲಾಯಿಸಲು ಜಾಗವಿದೆ. ಜನರು ಕೂಡ ಅಲ್ಲಿಯೇ ಈ ಬದಿಯಿಂದ ಆ ಬದಿಗೆ ಹೋಗುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.