ADVERTISEMENT

ಕೋಲಾರಮ್ಮ ಕೆರೆ ಕಾಮಗಾರಿ ಅವೈಜ್ಞಾನಿಕ: ಜಿಲ್ಲಾಧಿಕಾರಿಗೆ ಪತ್ರ

ಲೋಪ ಪತ್ತೆ ಹಚ್ಚಿದ ರಾಜ್ಯ ಮಾನವ ಹಕ್ಕುಗಳು ಆಯೋಗ;

ಕೆ.ಓಂಕಾರ ಮೂರ್ತಿ
Published 5 ಮೇ 2025, 6:47 IST
Last Updated 5 ಮೇ 2025, 6:47 IST
ಕೋಲಾರ ನಗರದ ಕೋಲಾರಮ್ಮ ಕೆರೆ ಸೌಂದರ್ಯೀಕರಣದ ಕಾಮಗಾರಿ
ಕೋಲಾರ ನಗರದ ಕೋಲಾರಮ್ಮ ಕೆರೆ ಸೌಂದರ್ಯೀಕರಣದ ಕಾಮಗಾರಿ    
  • ಇನ್ಫೊಸಿಸ್‌ನ ಸಿಎಸ್‌ಆರ್‌ ಅನುದಾನದಲ್ಲಿ ಜಿಲ್ಲಾಡಳಿತದಿಂದ ಕಾಮಗಾರಿ

  • ಕಾಮಗಾರಿ ಲೋಪದ ಬಗ್ಗೆ ಮುರಳಿಗೌಡ ದೂರು ಕೆರೆ

  • ಸಂರಕ್ಷಣಾ ಪ್ರಾಧಿಕಾರದ ಸೂಚನೆಯಂತೆ ಕಾಮಗಾರಿ ನಡೆಸಲು ಆದೇಶ

    ADVERTISEMENT

ಕೋಲಾರ: ಇನ್ಫೊಸಿಸ್‌ ಸಂಸ್ಥೆಯ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಅನುದಾನದಲ್ಲಿ ಕೋಲಾರಮ್ಮ ಕೆರೆಯ ಸೌಂದರ್ಯೀಕರಣಗೊಳಿಸಲು ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪವಿದೆ ಎಂದು ದೂರಿ ಕೋಲಾರ ನಗರಸಭೆ ಸದಸ್ಯ ಎಸ್‌.ಆರ್‌.ಮುರಳಿಗೌಡ ಪತ್ರ ಬರೆದಿದ್ದರು. ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹೆಚ್ಚು ಮಳೆ ಬಂದರೆ ಕೆರೆ ನೀರು ಹರಿದು ಸುತ್ತಲಿನ ನಿವಾಸಿಗಳಿಗೆ ಅಪಾಯ ಉಂಟಾಗಲಿದೆ ಎಂಬ ವಿಚಾರವನ್ನೂ ಗಮನಕ್ಕೆ ತಂದಿದ್ದರು.

ಆ ಬಳಿಕ ಆಯೋಗವು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗೆ (ದಕ್ಷಿಣ ವಲಯ) ಆಯೋಗವು ಪತ್ರ ಬರೆದು ಕೆರೆ ಅಭಿವೃದ್ಧಿ ಕಾಮಗಾರಿಯ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಂಡಿತ್ತು.

‘ವರದಿ ಅವಲೋಕಿಸಿದಾಗ ಕೋಲಾರದ ಅಮಾನಿಕೆರೆಯಲ್ಲಿ (ಕೋಲಾರಮ್ಮ) ಸಿಎಸ್‌ಆರ್‌ ಅನುದಾನದಲ್ಲಿ ಆನಂದ್‌ ಮಲ್ಲಿಗವಾಡ್‌ ಫೌಂಡರ್‌ ಮತ್ತು ಟ್ರಸ್ಟಿ ಮಲ್ಲಿಗವಾಡ್‌ ಫೌಂಡೇಷನ್‌ ಸಂಸ್ಥೆಯವರು ಪುನರುಜ್ಜೀವನ ಕಾಮಗಾರಿ ಕೈಗೊಂಡಿರುವುದು ಕಂಡುಬಂದಿದೆ. ಕೆರೆಯ ಸುತ್ತಲೂ ಕಟ್ಟಲಾಗಿರುವ ಬಂಡ್‌ಗೆ ಕೆರೆ ಹೂಳನ್ನೇ ಬಳಸಲಾಗಿದೆ. ಇದರಿಂದ ಬಂಡ್‌ನಲ್ಲಿ ಸೀಪೇಜ್‌ ಹೆಚ್ಚಾಗಿರುವುದು ಕಂಡುಬಂದಿದೆ. ಈ ಸಂಸ್ಥೆಯವರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದನ್ನು ಗಮನಿಸಿಯೂ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಕೋಲಾರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಯಾವುದೇ ಕ್ರಮ ವಹಿಸದಿರುವುದು ಶೋಚನೀಯ. ಈ ನಿಟ್ಟಿನಲ್ಲಿ ಮುಖ್ಯ ಎಂಜಿನಿಯರ್‌ ಸೂಚನೆಯಂತೆ ಸಂಸ್ಥೆಯವರು ಕಾಮಗಾರಿ ನಿಲ್ಲಿಸಿದ್ದು ಕಂಡುಬರುತ್ತದೆ’ ಎಂದು ಆಯೋಗವು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.

‘ಜಿಲ್ಲಾಧಿಕಾರಿಯು ಈ ಬಗ್ಗೆ ಗಮನ ಹರಿಸಿ ಅಮಾನಿಕೆರೆ ಪುನರುಜ್ಜೀವನ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಕೆರೆ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ ಷರತ್ತುಗಳ ಪ್ರಕಾರ ಕಾಮಗಾರಿ ನಡೆಸಲು ನಿರ್ದೇಶಿಸಬೇಕು’ ಎಂದು ಆದೇಶಿಸಿದೆ.

ಇನ್ಫೊಸಿಸ್‌ ಸಂಸ್ಥೆಯ ಸಿಎಸ್‌ಆರ್‌ ಅನುದಾನದಲ್ಲಿ ಕೋಲಾರಮ್ಮ ಕೆರೆ ಕಾಮಗಾರಿ ನಡೆಸಲು ವೆಂಕಟರಾಜು ಜಿಲ್ಲಾಧಿಕಾರಿಯಾಗಿದ್ದಾಗ ಅನುಮೋದನೆ ಸಿಕ್ಕಿತ್ತು. ಅಕ್ರಂ ಪಾಷಾ ಜಿಲ್ಲಾಧಿಕಾರಿಯಾಗಿದ್ದಾಗ ಕಾಮಗಾರಿಗೆ ಶುರುವಾಗಿತ್ತು. ₹ 20 ಕೋಟಿ ಸಿಎಸ್‌ಆರ್‌ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಎಷ್ಟು ವೆಚ್ಚ, ಏನೆಲ್ಲಾ ಕಾಮಗಾರಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಈವರೆಗೆ ನೀಡಿಲ್ಲ.

ಇದಲ್ಲದೇ, ಬೈಪಾಸ್‌ ರಸ್ತೆ ಕಡೆ ಕೆ.ಸಿ.ವ್ಯಾಲಿ ಅನುದಾನದಿಂದಲೂ ಕೋಲಾರಮ್ಮ ಕೆರೆ ಆವರಣದಲ್ಲಿ ಉದ್ಯಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗಿದೆ.

ಕೋಲಾರ ನಗರದ ಕೋಲಾರಮ್ಮ ಕೆರೆ ಸೌಂದರ್ಯೀಕರಣದ ಕಾಮಗಾರಿ
ರಾಜ್ಯ ಮಾನವ ಹಕ್ಕುಗಳು ಆಯೋಗವು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ

ಹೂಳಿನಲ್ಲೇ ಬಂಡ್‌ ನಿರ್ಮಿಸಿದ್ದಾರೆ!

ಕೋಲಾರಮ್ಮ ಕೆರೆ ಕಾಮಗಾರಿಯಲ್ಲಿ ಎಷ್ಟೊಂದು ಲೋಪವಾಗಿದೆ ಎಂದರೆ ಹೂಳನ್ನೇ ತೆಗೆದು ಕಟ್ಟೆ ಕಟ್ಟಿದ್ದಾರೆ. ಕಾಮಗಾರಿ ವೇಳೆ ಕೋಡಿಯನ್ನೇ ಒಡೆದು ಹಾಕಿದ್ದಾರೆ. ಇದರಿಂದ ಮುಂದೆ ದೊಡ್ಡ ಅಪಾಯದ ಸಾಧ್ಯತೆ ಇದೆ. ಜೋರು ಮಳೆಯಾದರೆ ಕಟ್ಟೆ ಒಡೆದು ಹೋಗುತ್ತದೆ ಕೆರೆಗೆ ಒಳಹರಿವು ಹೆಚ್ಚಿದಾಗ ಸುತ್ತಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಕೆರೆ ಸ್ವರೂಪ ಬದಲಾವಣೆ ಮಾಡುವ ಮುನ್ನ ಜನಪ್ರತಿನಿಧಿಗಳಿಗೆ ಪರಿಸರವಾದಿಗಳಿಗೆ ಪವರ್‌ ಪಾಯಿಂಟ್‌ ಪ್ರೆಜೆಂಟೇಷನ್‌ ಮಾಡಬೇಕಿತ್ತು. ಏನು ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಕೊಡಬೇಕಿತ್ತು. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಇದ್ಯಾವ ಕೆಲಸವನ್ನೂ ಮಾಡಿಲ್ಲ. ಮುಂದೆ ಏನಾದರೂ ಅನಾಹುತ ಉಂಟಾದರೆ ಯಾರು ಹೊಣೆ? ಒಂದು ಕಡೆ ಹೊಸ ಕಟ್ಟೆ ನಿರ್ಮಿಸಿ ಎತ್ತರ ಮಾಡಿದ್ದಾರೆ ಮತ್ತೊಂದು ಕಡೆ ಹಳೆ ಕಟ್ಟೆಗೆ ಮಣ್ಣು ಹಾಕಿ ವಿಸ್ತರಿಸಿದ್ದಾರೆ. ಕಟ್ಟೆ ಮೇಲೆ ರಸ್ತೆ ಫೆನ್ಸಿಂಗ್‌ ಮಾಡಲಾಗಿದೆ. ಈವರೆಗೆ ₹ 12 ಕೋಟಿ ಬಿಲ್‌ ಆಗಿರುವ ಮಾಹಿತಿ ಇದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಕ್ರಮ ವಹಿಸಲಿಲ್ಲ. ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೆ. ವಿಚಿತ್ರವೆಂದರೆ ಆಯೋಗವೇ ಪತ್ರ ಬರೆದರೂ ಜಿಲ್ಲಾಡಳಿತ ಕ್ರಮ ವಹಿಸಿಲ್ಲ. ಈ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿಗೆ ಪತ್ರ ಬರೆದು ನೆನಪಿಸಿದ್ದೇನೆ ಎಸ್‌.ಆರ್.ಮುರಳಿಗೌಡ ನಗರಸಭೆ ಸದಸ್ಯ ಕೋಲಾರ

ವೈಜ್ಞಾನಿಕ ಕಾಮಗಾರಿಗೆ ಆದೇಶ

‘ಜಿಲ್ಲಾಧಿಕಾರಿಯು ಈ ಬಗ್ಗೆ ಗಮನ ಹರಿಸಿ ಅಮಾನಿಕೆರೆ ಪುನರುಜ್ಜೀವನ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಕೆರೆ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ ಷರತ್ತುಗಳ ಪ್ರಕಾರ ಕಾಮಗಾರಿ ನಡೆಸಲು ನಿರ್ದೇಶಿಸಬೇಕು’ ಎಂದು ರಾಜ್ಯ ಮಾನವ ಹಕ್ಕುಗಳು ಆಯೋಗ ಪತ್ರದಲ್ಲಿ ಆದೇಶಿಸಿದೆ.

ಕೆಡಿಪಿ ಸಭೆಯಲ್ಲೂ ನಡೆದಿದ್ದ ಚರ್ಚೆ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಕೆರೆ ಕಾಮಗಾರಿ ಹಾಗೂ ಅನುದಾನ ಬಳಕೆ ಬಗ್ಗೆ ಚರ್ಚೆ ನಡೆದಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಮಾತನಾಡಿ ‘₹ 8 ಕೋಟಿ ವೆಚ್ಚದಲ್ಲಿ ಕೋಲಾರಮ್ಮ ಕೆರೆ ವಾಕಿಂಗ್ ಪಾತ್ ಕೆಲಸ‌ ಮುಗಿದಿದೆ. ಇನ್ಫೊಸಿಸ್‌ನಿಂದ ಸಿಎಸ್‌ಆರ್‌ ಅನುದಾನದಲ್ಲಿ ಕೆಲಸ ನಡೆಯುತ್ತಿದೆ. ಕೆರೆ‌ ಏರಿ‌ ಬಳಕೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಿ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಿ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆ ರೀತಿ ಹೇಳಿ ಎಂಟು ತಿಂಗಳು ಕಳೆದಿದೆ. 2023ರ ಜುಲೈನಲ್ಲಿ ಬೈರತಿ ಸುರೇಶ್‌ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಮುಂದಿನ ಜುಲೈಗೆ ಎರಡು ವರ್ಷಗಳಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.