ಮಾಲೂರು: ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಬಿಪಿಎಲ್ ಕಾರ್ಡ್ ಹೋಲ್ಡರ್ ಎಂದು ಘೋಷಣೆ ಮಾಡಿದರೆ, ತಾನು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಶಾಸಕ ಕೆ.ವೈ. ನಂಜೇಗೌಡ ಸವಾಲು ಹಾಕಿದರು.
ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ನಿಮ್ಮ ಅಪ್ಪ, ಅಮ್ಮ ಬಿಪಿಎಲ್ ಹೋಲ್ಡರ್ ಆಗಿದ್ದರು. ಆದರೆ ನೀವು ಈಗ ಆದಾಯ ತೆರಿಗೆ ಕಟ್ಟುತ್ತಿದ್ದೀರಿ. ಕಷ್ಟದಿಂದ ಮೇಲೆ ಬಂದು ಇವತ್ತು ಆರ್ಥಿಕವಾಗಿ ಸದೃಢರಾಗಿದ್ದೀರಿ. ನೀವು ಹೇಗೆ ಬಿಪಿಎಲ್ ಆಗುತ್ತೀರಿ. ನಂಜೇಗೌಡರು ಎಪಿಎಲ್, ನಾನು ಬಿಪಿಎಲ್ ಎಂದು ಎಲ್ಲ ಕಡೆ ಹೇಳುತ್ತಿದ್ದೀರಿ. ಇದು ಸರಿಯಲ್ಲ. ನೀವು ಬಿಪಿಎಲ್ ಹೊಲ್ಡರ್ ಎಂದು ಘೋಷಣೆ ಮಾಡಿದಲ್ಲಿ, ಇಂದೇ ರಾಜಕೀಯ ಬಿಟ್ಟು ಹೋಗುತ್ತೇನೆ’ ಎಂದು ಹೇಳಿದರು.
ಪ್ರತಿ ವರ್ಷ ಸೆಪ್ಟಂಬರ್ ತಿಂಗಳಿನೊಳಗೆ ಕಡ್ಡಾಯವಾಗಿ ಕೋಮುಲ್ ಸಾಮಾನ್ಯ ಸಭೆ ನಡೆಸಬೇಕು. ಇದಕ್ಕಾಗಿ ತುರ್ತುಸಭೆ ನಡೆಸಲಾಗಿದೆಯೇ ಹೊರತು ಯಾವುದೇ ಅಂಗೀಕಾರ ಪಡೆಯುವುದಕ್ಕಲ್ಲ ಎಂಬುದನ್ನು ಎಸ್.ಎನ್. ನಾರಾಯಣಸ್ವಾಮಿ ಅರಿತುಕೊಳ್ಳಬೇಕು ಎಂದು ಹೇಳಿದರು.
ಆಡಳಿತಾಧಿಕಾರಿ ಅವಧಿಯಲ್ಲಿ ₹60 ಕೋಟಿ ಅಕ್ರಮ ನಡೆದಿದೆ ಎಂದು ನಾರಾಯಣಸ್ವಾಮಿ ಆರೋಪಿಸುತ್ತಿದ್ದಾರೆ. ಆದರೆ, ಇಂಥ ಯಾವುದೇ ಆರೋಪಗಳು ಸತ್ಯವಲ್ಲ. ಆದಾಗ್ಯೂ, ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ನಾರಾಯಣಸ್ವಾಮಿ ಅವರೂ ಇದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.