ADVERTISEMENT

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 5:48 IST
Last Updated 23 ನವೆಂಬರ್ 2020, 5:48 IST
ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಭೇಟಿ ನೀಡಿ ಪರಿಶೀಲಿಸಿದರು
ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಭೇಟಿ ನೀಡಿ ಪರಿಶೀಲಿಸಿದರು   

ಮುಳಬಾಗಿಲು: ‘ಕೋಲಾರ ಜಿಲ್ಲೆಯಲ್ಲಿ ಐತಿಹಾಸಿಕ, ಪ್ರವಾಸಿ ಪುಣ್ಯ ಕ್ಷೇತ್ರಗಳ ಬಗ್ಗೆ ನಿರ್ಲಕ್ಷ್ಯವಹಿಸಿರುವ ಕಾರಣ ಅಳಿವಿನ ಅಂಚಿನಲ್ಲಿವೆ. ಪ್ರವಾಸಿ ಕ್ಷೇತ್ರಗಳ ಪುನಶ್ಚೇತನಕ್ಕೆ ಆದ್ಯತೆ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮವಹಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಹೇಳಿದರು.

ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ದೇವಾಲಯದ ಆವರಣದಲ್ಲಿ ಬೆಳೆದಿರುವ ಗಿಡಗಳು, ಅಭಿವೃದ್ಧಿ ಕಾಣದ ಕಲ್ಯಾಣಿಗಳನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸಹಯೋಗದಡಿ ಮತ್ತು ನರೇಗಾ ಯೋಜನೆಯಲ್ಲಿ ಅಭಿವೃದ್ಧಿಪಡಿಸುವಂತೆ ಸೂಚಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಆರ್. ರವಿಕುಮಾರ್ ಮಾತನಾಡಿ, ವಿರೂಪಾಕ್ಷಿ ದೇವಾಲಯಕ್ಕೆ 150 ಎಕರೆ ಆಸ್ತಿ ಇದೆ ಎಂಬ ಮಾಹಿತಿ ಇದೆ. ಈಗಿರುವ 3.38 ಎಕರೆ ವಿಸ್ತೀರ್ಣದ ದೇವಾಲಯದ ಸ್ಥಳದಲ್ಲಿ ಬೆಳೆದಿರುವ ಕಳೆಯನ್ನು ತೆರವುಗೊಳಿಸಲು ನರೇಗಾ ಯೋಜನೆಯಡಿ ಅನುದಾನವನ್ನು ಬಳಸಿಕೊಳ್ಳಲಾಗುವುದು. ಮುಜರಾಯಿ ಇಲಾಖೆ ಮತ್ತು ಜಿ.ಪಂ. ಅನುದಾನ ಬಳಸಿಕೊಂಡು ದೇವಾಲಯದ ಕಟ್ಟಡವನ್ನು ಹೊರತುಪಡಿಸಿ ಉಳಿದ ಕಡೆಯಲ್ಲಿ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೇವಾಲಯದ ಆವರಣದಲ್ಲಿ ಭಕ್ತಾದಿಗಳು ಕುಳಿತುಕೊಳ್ಳಲು ಆಸನ ಆಳವಡಿಸಲಾಗುವುದು. ಜೊತೆಗೆ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಸಲಾಗುವುದು. ವಿರೂಪಾಕ್ಷಿಯಿಂದ ಆವಣಿ ಗ್ರಾಮದವರೆವಿಗೂ ಸಿ.ಸಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಹಾಗಾಗಿ, ಡಿಸೆಂಬರ್ ತಿಂಗಳಲ್ಲಿ ಮತ್ತೆ ಆವಣಿ, ವಿರೂಪಾಕ್ಷಿ ಗ್ರಾಮಗಳಿಗೆ ಭೇಟಿ ನೀಡಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯಾ, ತಹಶೀಲ್ದಾರ್ ಕೆ.ಎನ್. ರಾಜಶೇಖರ್, ಅವಣಿ ಗ್ರಾ.ಪಂ. ಆಡಳಿತಾಧಿಕಾರಿ ಡಿ. ಗಿರಿಜೇಶ್ವರಿ, ಮಾಜಿ ಸದಸ್ಯ ವಿರೂಪಾಕ್ಷಿ ಮಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.