
ಬೇತಮಂಗಲ: ಗುಟ್ಟಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯೊಬ್ಬರಿಗೆ ನಿಗದಿತ ದಿನಕ್ಕೂ ಮೊದಲೇ ಹೆರಿಗೆ ಮಾಡಿಸಲು ಯತ್ನಿಸಿದ್ದು ಮಗು ಸಾವನ್ನಪ್ಪಿದೆ ಎಂದು ಗರ್ಭಿಣಿ ಪತಿ ಆರೋಪಿಸಿದ್ದಾರೆ.
ಕೋಡಿಹಳ್ಳಿ ರೂಪಾ-ಬಾಬು ದಂಪತಿ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ಪರಿಶೀಲನೆಗೆ ಹೋಗಿದ್ದರು. ಅಶಾ ಕಾರ್ಯಕರ್ತೆ ಮತ್ತು ನರ್ಸ್ ಹೆರಿಗೆ ದಿನಾಂಕಕ್ಕೂ ಮುಂಚೆಯೇ ಹೆರಿಗೆ ಮಾಡಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.
ಆಶಾ ಕಾರ್ಯಕರ್ತೆ ಮತ್ತು ನರ್ಸ್ ಹಣದ ಆಸೆಯಿಂದ ಹೆರಿಗೆ ಮಾಡಿಸಲು ಒತ್ತಾಯಿಸಿದರು. ಸಾಮರ್ಥ್ಯ ಇಲ್ಲದಿದ್ದರೂ ಉನ್ನತ ಆಸ್ಪತ್ರೆಗೆ ಕಳುಹಿಸದೆ ಸ್ವಂತವಾಗಿ ಹೆರಿಗೆ ಮಾಡಲು ಪ್ರಯತ್ನಿಸಿದರು. ಇದರಿಂದಾಗಿ ಮಗು ಸತ್ತಿದೆ ಎಂದು ಬಾಬು ಎಂಬುವವರು ಆರೋಪಿಸಿದರು.
ಆರೋಗ್ಯ ಕೇಂದ್ರ ವೈದ್ಯೆ ನಾಗವೇಣಿ, ‘ನಾನು ಆ ದಿನ ಬೇರೋಂದು ಕಾರ್ಯದಲ್ಲಿದ್ದೆ. ನರ್ಸ್ ರೋಗಿಯನ್ನು ಬೇರೆಯೊಂದು ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ್ದಾರೆ. ಆದರೆ, ಮಗು ಸಾವಿಗೆ ನರ್ಸ್ ಕಾರಣ’ ಎಂದು ಗರ್ಭಿಣಿ ಸಂಬಂಧಿಕರು ದೂರಿದ್ದಾರೆ ಎಂದರು.
ಗ್ರಾಮದ ಮುಖಂಡ ಪ್ರವೀಣ್ ಕುಮಾರ್ ಮತ್ತು ಅಂಬೇಡ್ಕರ್ ಯುವ ವೇದಿಕೆ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್, ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.