ADVERTISEMENT

ಬೀದಿಗಿಳಿದು ಕಸ ಎತ್ತಿದ ಸದಸ್ಯರು

ತಾರಕಕ್ಕೇರಿದ ನಗರಸಭೆ ಸದಸ್ಯರು–ಪೌರಾಯುಕ್ತರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:27 IST
Last Updated 17 ನವೆಂಬರ್ 2022, 4:27 IST
ಕೋಲಾರ ನಗರದಲ್ಲಿ ಬುಧವಾರ ಅಂಬರೀಷ್‌ ನೇತೃತ್ವದಲ್ಲಿ ನಗರಸಭೆಯ ಕೆಲ ಸದಸ್ಯರು ಬೀದಿಗಿಳಿದು ಕಸ ತೆಗೆದರು
ಕೋಲಾರ ನಗರದಲ್ಲಿ ಬುಧವಾರ ಅಂಬರೀಷ್‌ ನೇತೃತ್ವದಲ್ಲಿ ನಗರಸಭೆಯ ಕೆಲ ಸದಸ್ಯರು ಬೀದಿಗಿಳಿದು ಕಸ ತೆಗೆದರು   

ಕೋಲಾರ: ನಗರ ಸ್ವಚ್ಛತೆ, ನೀರು ಸರಬರಾಜು, ನಿರ್ವಹಣೆಯಲ್ಲಿ ಪೌರಾಯುಕ್ತರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರಸಭೆಯ ಹಲವು ಸದಸ್ಯರು ಬುಧವಾರ ಬೀದಿಗಿಳಿದು ತಾವೇ ಕೈಯಿಂದ ಕಸ ಎತ್ತಿ ಹಾಕಿದರು.

ಖಾತೆ, ಕಂದಾಯ ವಸೂಲಿ, ಸ್ವಚ್ಛತೆ, ಬೀದಿನಾಯಿ ಸಮಸ್ಯೆ ಸೇರಿದಂತೆ ಹಲವಾರ ವಿಚಾರಗಳ ಸಂಬಂಧ ತಿಂಗಳಿನಿಂದ ನಗರಸಭೆ ಸದಸ್ಯರು ಹಾಗೂ ಪೌರಾಯುಕ್ತೆ ಬಿ.ಎಸ್‌. ಸುಮಾ ನಡುವೆ ಬಹಿರಂಗವಾಗಿ ಜಟಾಪಟಿ ನಡೆಯುತ್ತಿದೆ. ಅದೀಗ ಮತ್ತಷ್ಟು ಸ್ಫೋಟಗೊಂಡಿದೆ.

ತ್ಯಾಜ್ಯ ಸಾಗಿಸುವ ನಗರಸಭೆಯ ವಾಹನಗಳಿಗೆ ಡೀಸೆಲ್‌ ಇಲ್ಲದೆ ಕಸ ತುಂಬಿದ ಗಾಡಿಗಳು ಹಾಗೂ ಖಾಲಿ ವಾಹನಗಳು ಮೂರು ದಿನ ಆವರಣದಲ್ಲೇ ನಿಂತಿದ್ದವು. ಇಂಧನ ತುಂಬಿಸುವ ಬಂಕ್‍ಗೆ ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ, ನಗರದಾದ್ಯಂತ ಕಸದ ರಾಶಿಯೇ
ಸೃಷ್ಟಿಯಾಗಿತ್ತು.

ADVERTISEMENT

ಷಾಹಿಂಷಾನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಸದಸ್ಯರು ಸುಮಾ ವಿರುದ್ಧ ವಾಗ್ದಾಳಿ ನಡೆಸಿದರು. ತಾವೇ ಕಸ ಬಾಚಿ ಟ್ರಾಕ್ಟರ್‌ಗೆ ತುಂಬಿದರು.

ಸದಸ್ಯ ಅಂಬರೀಷ್‌ ಮಾತನಾಡಿ, ‘‍ಪೌರಾಯುಕ್ತರಿಂದ ನಗರದ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಯಾವುದೇ ಕೆಲಸ ನಡೆಯುತ್ತಿಲ್ಲ. ದೂರು ನೀಡಿದರೆ ಜಿಲ್ಲಾಧಿಕಾರಿಯೂ ಸ್ಪಂದಿಸುತ್ತಿಲ್ಲ. ಹೀಗಾಗಿ, ನಾವೇ ಕಸ ಎತ್ತಲು ಮುಂದಾಗಿದ್ದೇವೆ. ಮೋರಿ ಕೂಡ ನಾವೇ ಸ್ವಚ್ಛಗೊಳಿಸುತ್ತೇವೆ. ಅಭಿಯಾನವೇ ನಡೆಯಲಿದೆ. ಪೌರಾಯುಕ್ತರಿಗೆ ಜನರ ಕೆಲಸದ ಬಗ್ಗೆ ಇಚ್ಛಾಶಕ್ತಿ ಇಲ್ಲ. ಹುದ್ದೆಗೆ ರಾಜೀನಾಮೆ ನೀಡಿ ಈ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲಿ’ ಎಂದು
ಹೇಳಿದರು.

‘ಪೌರಾಯುಕ್ತರು ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್ ಹಾಕಿಸದ ಕಾರಣ ಇಡೀ ನಗರದಲ್ಲಿ ಕಸ ವಿಲೇವಾರಿಯಾಗದೆ ಕಬ್ಬುನಾರುತಿದೆ. ವಾಹನಗಳಿಗೆ ಡೀಸೆಲ್ ಹಾಕಿಸಿ 10 ದಿನ ಕಳೆದರೂ ನಗರದ ಬಹುತೇಕಕಡೆ ಕಸ ವಿಲೇವಾರಿಯಾಗಿಲ್ಲ’ ಎಂದರು.

ನಗರಸಭೆಯ ಸದಸ್ಯರಾದ ಪ್ರಸಾದ್‌ ಬಾಬು, ನಾರಾಯಣಮ್ಮ, ಅಪೂರ್ವ, ಲಕ್ಷ್ಮಿ, ನಾಜಿಯಾ ಬಾಬಾಜಾನ್, ಮಂಜುನಾಥ್‌, ಅಮರ್‌, ಶಫಿ ಸೇರಿದಂತೆ ಹಲವರು ಈ ಕಾರ್ಯದಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.