ADVERTISEMENT

ಶಾಸಕ ಶ್ರೀನಿವಾಸಗೌಡ ಒಕ್ಕಲಿಗ ಸಮುದಾಯಕ್ಕೆ ಕಳಂಕ: ಬೆಗ್ಲಿ ಪ್ರಕಾಶ್‌

ನಗರಸಭೆ ಉಪಾಧ್ಯಕ್ಷರ ಪದಚ್ಯುತಿಗೆ ಕಾರಣ: ಒಕ್ಕಲಿಗ ಮುಖಂಡ ಬೆಗ್ಲಿ ಪ್ರಕಾಶ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 12:04 IST
Last Updated 9 ಏಪ್ರಿಲ್ 2022, 12:04 IST

ಕೋಲಾರ: ‘ಶಾಸಕ ಕೆ.ಶ್ರೀನಿವಾಸಗೌಡರು ಒಕ್ಕಲಿಗ ಸಮುದಾಯಕ್ಕೆ ದೊಡ್ಡ ಕಳಂಕ’ ಎಂದು ಒಕ್ಕಲಿಗ ಮುಖಂಡ ಬೆಗ್ಲಿ ಪ್ರಕಾಶ್‌ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ ನಗರಸಭೆ ಉಪಾಧ್ಯಕ್ಷರಾಗಿದ್ದ ಒಕ್ಕಲಿಗ ಸಮುದಾಯದ ಪ್ರವೀಣ್‌ಗೌಡ ರಾಜಕೀಯವಾಗಿ ಬೆಳೆಯುತ್ತಿದ್ದರು. ಆದರೆ, ಇದನ್ನು ಸಹಿಸದ ಶ್ರೀನಿವಾಸಗೌಡ ಅವರು ಪ್ರವೀಣ್‌ಗೌಡರ ಪದಚ್ಯುತಿಗೆ ಸಂಚು ರೂಪಿಸಿ ಅವಿಶ್ವಾಸ ನಿರ್ಣಯ ಮಂಡನೆಯಾಗುವಂತೆ ಮಾಡಿದರು’ ಎಂದು ದೂರಿದರು.

‘ಶ್ರೀನಿವಾಸಗೌಡರು ಶಾಸಕರಾಗಿ ಒಕ್ಕಲಿಗ ಸಮಯದಾಯಕ್ಕೆ ಏನೂ ಕೊಡುಗೆ ನೀಡಿಲ್ಲ. ರಾಜಕೀಯವಾಗಿ ಇನ್ನೂ ಬೆಳೆಯಬೇಕಿದ್ದ ಪ್ರವೀಣ್‌ಗೌಡರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿ ಅವರ ಕತ್ತು ಕೊಯ್ದು ದ್ರೋಹ ಬಗೆದರು. ಶ್ರೀನಿವಾಸಗೌಡರು ಜಾತಿ ದ್ರೋಹಿ. ಶಾಸಕನಾಗಲು ಅನುಕೂಲ ಪಡೆದು ಸಹಾಯ ಮಾಡಿದವರಿಗೆ ದ್ರೋಹ ಬಗೆದಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಪ್ರವೀಣ್‌ಗೌಡರ ಪದಚ್ಯುತಿಗೆ ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಗೋವಿಂದರಾಜು ಸಹ ಕಾರಣ. ಅವರು ಅವಿಶ್ವಾಸ ನಿರ್ಣಯ ಮಂಡನೆ ದಿನ ಉದ್ದೇಶಪೂರ್ವಕವಾಗಿ ಸಭೆಗೆ ಗೈರಾದರು. ಸಭೆಯ ದಿನ ಕೋಲಾರದಲ್ಲೇ ಇದ್ದುಕೊಂಡು ಬೆಂಗಳೂರಿನಲ್ಲಿ ಇದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಗೋವಿಂದರಾಜು ಮತ್ತು ಶ್ರೀನಿವಾಸಗೌಡರಿಗೆ ಶಾಸಕರಾಗಿ ಮುಂದುವರಿಯಲು ಯಾವ ನೈತಿಕತೆ ಇದೆ?’ ಎಂದು ಪ್ರಶ್ನಿಸಿದರು.

ದ್ರೋಹ ಖಂಡನೀಯ: ‘ನಗರದ ಗಾಂಧಿನಗರ ವಾರ್ಡ್‌ ‍ಪ್ರತಿನಿಧಿಸುವ ಪ್ರವೀಣ್‌ಗೌಡರು ಜೆಡಿಎಸ್‌ ಪಕ್ಷದವರು. ಗಾಂಧಿನಗರದಲ್ಲಿ ಹೆಚ್ಚಾಗಿ ಬಲಜಿಗ ಮತ್ತು ದಲಿತ ಸಮುದಾಯದವರಿದ್ದಾರೆ, ಅಂತಹ ವಾರ್ಡ್‌ನಿಂದ ಒಕ್ಕಲಿಗರು ಆಯ್ಕೆಯಾಗುವುದು ಸುಲಭದ ಮಾತಲ್ಲ. ಅವಿಶ್ವಾಸ ನಿರ್ಣಯ ಮಂಡನೆ ದಿನ ಶ್ರೀನಿವಾಸಗೌಡರು ಪ್ರವೀಣ್‍ಗೌಡಗೆ ಬೆಂಬಲ ಸೂಚಿಸದೆ ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ’ ಎಂದು ಕುಟುಕಿದರು.

‘ಶ್ರೀನಿವಾಸಗೌಡರು ತಾಯಿ ಸ್ಥಾನದಲ್ಲಿರುವ ತಮ್ಮ ಪಕ್ಷಕ್ಕೆ ಮತ್ತು ತಮ್ಮದೇ ಸಮುದಾಯದ ಪ್ರವೀಣ್‌ಗೌಡ ಅವರಿಗೆ ದ್ರೋಹ ಬಗೆದಿರುವುದು ಖಂಡನೀಯ. ಅವರಿಗೆ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ವಿಶ್ವಾಸ ಗಳಿಸಲಿ’ ಎಂದರು.

ಕೃತಜ್ಞತೆ ಇಲ್ಲ: ‘ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಶ್ರೀನಿವಾಸಗೌಡರ ದ್ವಂದ್ವ ನಿಲುವಿನ ಕಾರಣಕ್ಕೆ ಜೆಡಿಎಸ್‌ ವರಿಷ್ಠರು ಅವರಿಗೆ ಟಿಕೆಟ್‌ ಕೊಡುವ ವಿಚಾರವಾಗಿ ಗೊಂದಲದಲ್ಲಿದ್ದರು. ಆದರೂ ಸ್ಥಳೀಯ ಒಕ್ಕಲಿಗ ಮುಖಂಡರ ಒತ್ತಾಯಕ್ಕೆ ಮಣಿದು ಟಿಕೆಟ್‌ ಕೊಟ್ಟರು. ಆದರೆ, ಶ್ರೀನಿವಾಸಗೌಡರಿಗೆ ಆ ಕೃತಜ್ಞತೆ ಇಲ್ಲ. ಗೆದ್ದು ಶಾಸಕರಾದ ನಂತರ ಕುಮಾರಸ್ವಾಮಿ ಅವರನ್ನು ಎದುರಾಕಿಕೊಂಡರು. ಕ್ಷೇತ್ರದ ಅಭಿವೃದ್ಧಿಗೆ ನಯಾ ಪೈಸೆ ತರಲಿಲ್ಲ’ ಎಂದು ಟೀಕಿಸಿದರು.

‘ವರ್ತೂರು ಪ್ರಕಾಶ್ 2 ಬಾರಿ ಪಕ್ಷೇತರರಾಗಿ ಗೆದ್ದು ಶಾಸಕರಾದವರು. ಹಿಂದೆ ಬಿಜೆಪಿಯವರೇ ಅವರ ಮನೆ ಬಾಗಿಲಿಗೆ ಬಂದು ಸರ್ಕಾರ ರಚನೆಗೆ ಬೆಂಬಲ ಕೋರಿದರು. ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿಯವರೇ ಬೆಂಬಲ ಕೋರಿದರು. ಹೀಗಾಗಿ ವರ್ತೂರು ಪ್ರಕಾಶ್‌ ಬಿಜೆಪಿಯನ್ನು ಬೆಂಬಲಿಸಿದರು. ಅವರು ಪಕ್ಷೇತರರಾದ ಕಾರಣ ಯಾರೂ ಪ್ರಶ್ನಿಸುವಂತಿಲ್ಲ. ಶ್ರೀನಿವಾಸಗೌಡರು ಕಾಂಗ್ರೆಸ್‌ನಿಂದ ಅಥವಾ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ತಲೆಗೂದಲು ಬೋಳಿಸಿಕೊಂಡು ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದು ಸವಾಲು ಹಾಕಿದರು.

ಎಪಿಎಂಸಿ ಮಾಜಿ ಸದಸ್ಯ ಅಪ್ಪಯ್ಯಪ್ಪ, ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್, ಸದಸ್ಯರಾದ ವೆಂಕಟೇಶ್, ಮುನಿರಾಜು, ತಾ.ಪಂ ಮಾಜಿ ಸದಸ್ಯ ಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.