ಮಾಲೂರು: ಪುರಸಭೆಯ ಆಶ್ರಯ ಯೋಜನೆ ಅಡಿ ಉಚಿತ ನಿವೇಶನಗಳಿಗೆ ₹ 35 ಸಾವಿರ ಸಂದಾಯ ಮಾಡಿರುವ ಪ್ರತಿಯೊಬ್ಬ ಫಲಾನುಭವಿಗಳಿಗೂ 15 ದಿನಗಳ ಒಳಗೆ ಹಣ ಮರು ಪಾವತಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಸೂಚಿಸಿದರು.
ಪಟ್ಟಣದ ಪುರಸಭ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುರಸಭೆ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶಾಸಕರಾದ ನಂತರ ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿ ಸರ್ಕಾರದಿಂದ 16 ಎಕರೆ ಭೂಮಿಯನ್ನು ಮಂಜೂರು ಮಾಡಿಸಿದ್ದು, ಪ್ರತಿ ಫಲಾನುಭವಿಗೂ ಉಚಿತ ನಿವೇಶನ ನೀಡಲಾಗುವುದು. ಜತೆಗೆ 780 ಮಂದಿ ಫಲಾನುಭವಿಗಳಿಂದ ತಲಾ ₹ 35 ಸಾವಿರದಂತೆ ಒಟ್ಟು ₹ 2.70 ಕೋಟಿ ಸಂಗ್ರಹ ಮಾಡಲಾಗಿತ್ತು. ಈ ಹಣವನ್ನು 15 ದಿನಗಳೊಳಗೆ ಪ್ರತಿ ಫಲಾನುಭವಿಗಳಿಗೂ ಮರು ಪಾವತಿ ಮಾಡಬೇಕು’ ಎಂದರು.
ಪುರಸಭೆ ಆಶ್ರಯ ಸಮಿತಿ ಅಡಿ ಪಟ್ಟಣದ ಬಡಜನರಿಗೆ ಉಚಿತವಾಗಿ ನಿವೇಶನ ನೀಡಲು ಸರ್ಕಾರದಿಂದ ಬಿಡುಗಡೆಯಾಗಿರುವ ಒಟ್ಟು 30 ಎಕರೆಯನ್ನು ಸಮತಟ್ಟು ಮಾಡಿಸುವ ಕಾಮಗಾರಿ ನಡೆಯುತ್ತಿದೆ. ಆಶ್ರಯ ಯೋಜನೆ ಅಡಿ ನೀಡಲಾಗುತ್ತಿರುವ ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಡಿಪಿಆರ್ ಸಿದ್ಧಪಡಿಸಿ ರಾಜೀವ ಗಾಂಧಿ ವಸತಿ ನಿಗಮಕ್ಕೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಪ್ರಸಾದ್ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ತ್ಯಾಜ್ಯ ನಿರ್ವಹಣೆಗೆ ಸ್ಥಳಾವಕಾಶ ಅಗತ್ಯವಿದೆ. ಆದ್ದರಿಂದ ಪಟ್ಟಣದ ಹೊರ ವಲಯದಲ್ಲಿ 8 ಎಕರೆಯನ್ ಮುಂಜೂರು ಮಾಡಿಕೊಡಬೇಕೆಂದು ಜಿಲ್ಲಾ ಉಪ ವಿಭಾಗಾಧಿಕಾರಿ ಸೋಮಶೇಖರ್ ಅವರಲ್ಲಿ ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಸೋಮಶೇಖರ್, ಪಟ್ಟಣದ ಹೊರವಲಯದಲ್ಲಿ 8 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಂತೆ ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚಿಸಿದರು.
ಎಂಜಿನಿಯರ್ ಮಂಜುನಾಥ್, ಆಶ್ರಯ ಸಮಿತಿ ಅಧಿಕಾರಿ ಮಂಜುನಾಥ್,ಸಿಬ್ಬಂದಿ ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.